ಮುಗಳಖೋಡ: ‘ದೇವಸ್ಥಾನಗಳನ್ನು ನಿರ್ಮಿಸಿ, ನಿತ್ಯವೂ ದೇವರ ಧ್ಯಾನ ಮಾಡುವುದರಿಂದ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಭಕ್ತಿ ಹೆಚ್ಚಾಗಿ ಗ್ರಾಮಗಳ ಸುಧಾರಣೆ ಸಾಧ್ಯವಾಗುತ್ತದೆ’ ಎಂದು ಬಂಡಿಗಣಿಯ ಬಸವ ಗೋಪಾಲ ನೀಲಮಾಣಿಕ ಮಠದ ಅನ್ನದಾನೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಇಟನಾಳ ಗ್ರಾಮದಲ್ಲಿ ಶೆಟ್ಟೆಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ನಡೆದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶೆಟ್ಟೆಮ್ಮದೇವಿ ಬಹಳ ಜಾಗೃತ ದೇವಿಯಾಗಿದ್ದಾಳೆ. ಸುಳ್ಳು, ಕಳ್ಳತನ ಬಿಟ್ಟು ಪೂರ್ಣವಾಗಿ ಆ ದೇವಿಯನ್ನು ನಂಬಿ ನಡೆದರೆ ಸಕಲ ಸೌಭಾಗ್ಯವೂ ದೊರೆಯುತ್ತವೆ’ ಎಂದರು.
‘ಪಂಚಾಗ, ಮೂಢನಂಬಿಕೆ, ಮಂತ್ರವಾದಿಗಳನ್ನು ನಂಬಿ ಜೀವನ ಹಾಳು ಮಾಡಿಕೊಳ್ಳಬಾರದು. ದೇವರನ್ನು ಪೂರ್ಣವಾಗಿ ನಂಬಿ ನಡೆದರೆ, ಕಷ್ಟಗಳು ಕರಗಿ ಜೀವನ ಸುಖವಾಗಿರುತ್ತದೆ. ಅಸ್ತಿ, ಅಧಿಕಾರ ಹಾಗೂ ಶ್ರೀಮಂತಿಕೆ ಬಂದಾಗ ಅಹಂಕಾರ ಪಡದೆ ಸಂಸ್ಕಾರ, ನೀತಿ ಮತ್ತು ಧರ್ಮವನ್ನು ಪಾಲಿಸಬೇಕು. ಶ್ರೀಮಂತನಾದರೂ ಬಡವನಂತೆ ಇರಬೇಕು’ ಎಂದು ಸಲಹೆ ನೀಡಿದರು.