ಬೆಳಗಾವಿ: ಚಲನಚಿತ್ರ ಗೀತರಚನೆಕಾರ ಕೆ.ಕಲ್ಯಾಣ್ ಅವರಿಂದ ವಿವಾಹ ವಿಚ್ಛೇದನ ಕೋರಿ ಪತ್ನಿ ಅಶ್ವಿನಿ ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಇದರೊಂದಿಗೆ ಅವರ ದಾಂಪತ್ಯ ಜೀವನದಲ್ಲಿ ಉಂಟಾಗಿದ್ದ ಕಲಹ ಸುಖಾಂತ್ಯ ಕಂಡಂತಾಗಿದೆ.
ಅರ್ಜಿ ವಾಪಸ್ ಪಡೆದಿರುವುದನ್ನು ಪೊಲೀಸ್ ಮೂಲಗಳು ಖಚತಪಡಿಸಿವೆ. ಪ್ರತಿಕ್ರಿಯೆಗೆ ಅಶ್ವಿನಿ ಲಭ್ಯವಾಗಲಿಲ್ಲ.
‘ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ಹಾಗೂ ಮಂತ್ರವಾದಿ ಶಿವಾನಂದ ವಾಲಿ ಎನ್ನುವವರಿಂದ ನಮ್ಮ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿದೆ. ಅವರು ಪತ್ನಿ, ಅತ್ತೆ ಹಾಗೂ ಮಾವನನ್ನು ಅಪಹರಿಸಿ, ಆಸ್ತಿ ಬರೆಸಿಕೊಂಡಿದ್ದಾರೆ ಮತ್ತು ಹಣ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಕಲ್ಯಾಣ್ ಅವರು ಇಲ್ಲಿನ ಮಾಳಮಾರುತಿ ಪೊಲೀಸ್ ಠಾಣೆಗೆ ಸೆ. 30ರಂದು ದೂರು ನೀಡಿದ್ದರು.
ಇದನ್ನು ಆಧರಿಸಿ ಪೊಲೀಸರು ಆರೋಪಿ ಶಿವಾನಂದನನ್ನು ಬಂಧಿಸಿ, ₹ 6 ಕೋಟಿ ಮೊತ್ತದ ಚಿನ್ನಾಭರಣ ಹಾಗೂ ಆಸ್ತಿ ವಶಕ್ಕೆ ಪಡೆದಿದ್ದರು. ಈ ನಡುವೆ, ಅಶ್ವಿನಿ ಅವರನ್ನು ಆಪ್ತಸಮಾಲೋಚನೆಗೆ ಒಳಪಡಿಸಿದ್ದರು. ವಿಚ್ಛೇದನ ಅರ್ಜಿ ವಾಪಸ್ ತೆಗೆದುಕೊಳ್ಳುವುದಾಗಿ ಮತ್ತು ಕಲ್ಯಾಣ್ ಜೊತೆಗೆ ದಾಂಪತ್ಯ ಜೀವನ ಮುಂದುವರಿಸುವುದಾಗಿ ಅಶ್ವಿನಿ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ಗುರುವಾರ ಅವರು 2ನೇ ಜೆಎಂಎಫ್ ನ್ಯಾಯಾಲಯದ ಎದುರು ಹಾಜರಾಗಿ ಶಿವಾನಂದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಆರೋಪಿ ಶಿವಾನಂದಗೆ ಗುರುವಾರ ಇಲ್ಲಿನ 2ನೇ ಜೆಎಂಎಫ್ ನ್ಯಾಯಾಲಯ ನ್ಯಾಯಾಧೀಶರಾದ ಲತಾ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ಅವರನ್ನು ಇನ್ನೂ ಬಂಧಿಸಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.