ತೆಲಸಂಗ (ಬೆಳಗಾವಿ ಜಿಲ್ಲೆ): ‘ಕೋವಿಡ್ ಅಲೆಯಲ್ಲಿ ಸೇವೆ ಮಾಡಿದ್ದಕ್ಕೆ ಜನರು ನಮ್ಮನ್ನು ದೇವರೆಂದು ಕರೆದರು. ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು? ವೈದ್ಯೆಯಾಗಿರುವುದಕ್ಕೆ ಜೀವನ ಸಾರ್ಥಕವಾಯಿತು’ ಎಂದು ವೈದ್ಯಾಧಿಕಾರಿ ಡಾ.ವಾಸಂತಿ ಹೇಳಿದರು.
ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜನರ ಸೇವೆ ಮಾಡುವುದು ವೈದ್ಯರ ಕರ್ತವ್ಯ. ರೈತ ಬಿತ್ತಿ ಬೆಳೆದರೆ, ಕೂಲಿ ಮಾಡುವವರು ದುಡಿಮೆ ಮೂಲಕ ಸಹಾಯ ಮಾಡುವರು. ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಸೇವೆ ಮಾಡುವರು. ಅವರವರ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಪ್ರಮುಖವಾಗುತ್ತದೆ. ನಮ್ಮಿಂದಲೇ ಎನ್ನುವ ಅಹಂಕಾರ ಸಲ್ಲದು’ ಎಂದರು.