ತೆಲಸಂಗ: ಸಮೀಪದ ಬನ್ನೂರ ಗ್ರಾಮದ ಗ್ರಾಮ ದೇವತೆ ದುರ್ಗಾದೇವಿಯ ಅಧಿಕ ಮಾಸದ ನಿಮಿತ್ತ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ದೇವಿಯ ಹೊಳೆ ಸ್ನಾನಕ್ಕೂ ಕೊರೊನಾ ಕಂಟಕ ಎದುರಾಗಿದೆ. ಮೂರು ದಿನಗಳ ಬದಲಿಗೆ ಜಾತ್ರೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ. ಮಂಗಳವಾರ ಹೊಳೆ ಸ್ನಾನಕ್ಕೆ ಭಕ್ತರು ತೆರಳುವ ಕಾರ್ಯಕ್ರಮ ನಡೆಯಿತು.
ಬನ್ನೂರ ಗ್ರಾಮದ ಪ್ರತಿಯೊಂದು ಮನೆ ಬಾಗಿಲನ್ನೂ ಮುಚ್ಚಿ ಬಾಲಕರಿಂದಿಡಿದು ವೃದ್ಧರವರೆಗೆ ಎಲ್ಲರೂ ಹೊಳೆ ಸ್ನಾನಕ್ಕೆ 3 ದಿನ ತೆರಳುವುದು ವಾಡಿಕೆ. ಆದರೆ, ಪ್ರಸಕ್ತ ವರ್ಷ ಕೊರೊನಾ ಕಾರಣದಿಂದಾಗಿ ವಿಜೃಂಭಣೆ ಇರಲಿಲ್ಲ. ಹಿಂದಿನಿಂದ ನಡೆದು ಬಂದ ಆಚರಣೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಹೊಳೆ ಸ್ನಾನ ಕಾರ್ಯಕ್ರಮ ಸರಳವಾಗಿತ್ತು. 200ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಲ್ಲಿ ಜನರು ಪಲ್ಲಕ್ಕಿ ಜೊತೆಗೆ ಹೊಳೆ ದಾರಿ ಹಿಡಿದಿದ್ದರು. ಪ್ರತಿ ವರ್ಷ ಮೆರವಣಿಗೆಯಲ್ಲಿ ತೆರಳುತ್ತಿದ್ದ ಪಲ್ಲಕ್ಕಿಯನ್ನು ಈ ಬಾರಿ ಟ್ರ್ಯಾಕರ್ನಲ್ಲಿ ಸಾಗಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮದ ಹಿರಿಯರಾದ ಮುರಳೀಧರ ಕುಲಕರ್ಣಿ, ‘ಕೊರೊನಾ ಜನರ ಜೀವ ಹಿಂಡುತ್ತಿದೆ. ಈ ಸಂಕಷ್ಟದಿಂದ ಎಲ್ಲರನ್ನೂ ದೂರ ಮಾಡಲೆಂದು ಶಕ್ತಿ ಸ್ವರೂಪಿ ದುರ್ಗಾದೇವಿಯನ್ನು ಪ್ರಾರ್ಥಿಸಿದ್ದೇವೆ’ ಎಂದರು.