ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಓಗೊಟ್ಟು ನಗರದ ಜನತೆ ಭಾನುವಾರ ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ದೀಪಗಳನ್ನು ಉರಿಸಿದರು.
ಕೊರೊನಾ ವೈರಾಣು ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಒಗ್ಗಟ್ಟು ಪ್ರದರ್ಶಿಸಲು 9 ನಿಮಿಷಗಳ ಕಾಲ ಮನೆಯಲ್ಲಿನ ವಿದ್ಯುತ್ ದೀಪಗಳನ್ನು ಆರಿಸಿ, ಎಣ್ಣೆ ದೀಪ ಅಥವಾ ಟಾರ್ಚ್ಗಳನ್ನು ಮನೆಯ ಹೊರಗೆ ಬಂದು ಉರಿಸಬೇಕೆಂದು ಮೋದಿ ಕರೆ ನೀಡಿದ್ದರು.
ಮೋದಿ ಕರೆಗೆ ಬೆಂಬಲ ನೀಡಿದ ನಗರದ ಬಹುತೇಕ ಎಲ್ಲ ಬಡಾವಣೆಗಳ ಜನರು, ತಮ್ಮ ತಮ್ಮ ಮನೆಯಿಂದ ಹೊರಬಂದು, ಬಾಲ್ಕನಿ, ಮನೆಯ ಮೇಲೆ, ಮುಂಬಾಗಿಲು ಬಳಿ ಬಂದು ದೀಪ ಪ್ರಜ್ವಲಿಸಿದರು. ದೀಪಾವಳಿ ಹಬ್ಬವನ್ನು ನೆನಪಿಸುವಂತಿತ್ತು.
ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಮನೆಯ ಎಲ್ಲ ಸದಸ್ಯರು ಹೊರಬಂದು ದೀಪ ಬೆಳಗಿದರು. ಕೆಲವರು ಪಟಾಕಿ ಸಿಡಿಸಿದರು. ಇನ್ನು ಕೆಲವರು, ‘ಗೋ ಕೊರೊನಾ ಗೋ ಕೊರೊನಾ...’ ಎಂದು ಘಂಟಾಘೋಷವಾಗಿ ಕೂಗಿದರು.