ಯಕ್ಸಂಬಾ (ಬೆಳಗಾವಿ ಜಿಲ್ಲೆ): ಬಾಡಿಗೆ ಪಡೆದ ಹೊಲದಲ್ಲಿ ಟೊಮೆಟೊ ಬೆಳೆದ ರೈತ ಸಾಗರ ಗೋಪಾಲ ಮಗದುಮ್ ಎಂಬುವರು ಈಗ ಕೋಟ್ಯಧಿಪತಿ ಆಗಿದ್ದಾರೆ. ದೆಹಲಿ, ಗೋವಾಗೆ ನೇರ ಮಾರಾಟ ಮಾಡಿ, ಕಡಿಮೆ ಶ್ರಮದಲ್ಲೇ ಹೆಚ್ಚು ಲಾಭ ಗಳಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಉಮನವಾಡಿಯ ಸಾಗರ ಗೋಪಾಲ ಮಗದುಮ್ ಅವರು ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದಲ್ಲಿ ಅವರು 2 ಎಕರೆ ಜಮೀನು ಹೊಂದಿದ್ದಾರೆ. ಅಕ್ಕಪಕ್ಕದ ರೈತರಿಂದ 7 ಎಕರೆ ಬಾಡಿಗೆ ಕರಾರಿನ ಮೇಲೆ ಒಕ್ಕಲು ಮಾಡುತ್ತಾರೆ. ಎಲ್ಲ 9 ಎಕರೆಯಲ್ಲೂ ಟೊಮೆಟೊ ಬೆಳೆದಿದ್ದು, ಪ್ರತಿ ಎಕರೆಗೆ 40ರಿಂದ 45 ಟನ್ ಇಳುವರಿ ಬಂದಿದೆ.
ಈವರೆಗೆ (ಆ.3) ಶೇ 30ರಷ್ಟು ಭಾಗ ಮಾತ್ರ ಮಾರಾಟ ಮಾಡಿದ್ದಾರೆ. ₹50 ಲಕ್ಷಕ್ಕೂ ಅಧಿಕ ಗಳಿಕೆಯಾಗಿದೆ. ಇನ್ನೂ ₹50 ಲಕ್ಷದಷ್ಟು ಮಾಲನ್ನು ಗ್ರಾಹಕರು ಮುಂಗಡ ಕಾಯ್ದಿರಿಸಿದ್ದಾರೆ. ಟೊಮೆಟೊ ದರ ಇನ್ನೊಂದು ತಿಂಗಳು ಹೀಗೆಯೇ ಮುಂದುವರಿದರೆ ಇನ್ನೂ ₹ 1ಕೋಟಿ (ಒಟ್ಟು ₹2 ಕೋಟಿ) ಲಾಭವಾಗುವ ನಿರೀಕ್ಷೆಯಲ್ಲಿ ಅವರು ಇದ್ದಾರೆ.
ಹೈಬ್ರೀಡ್ ಟೊಮೆಟೊಗೆ ದೆಹಲಿ ಹಾಗೂ ಗೋವಾದಲ್ಲಿ ಹೆಚ್ಚು ಬೇಡಿಕೆ ಇದೆ. ಅಲ್ಲಿನ ವ್ಯಾಪಾರಿಗಳು ನೇರ ರೈತರೊಂದಿಗೆ ನೇರ ಸಂಪರ್ಕ ಸಾಧಿಸಿ, ವಾಹನಗಳಲ್ಲಿ ಬಂದು ಟೊಮೆಟೊ ಖರೀದಿಸುತ್ತಾರೆ. ಸದ್ಯ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಟೊಮೆಟೊ ದರ ಪ್ರತಿ ಕೆಜಿಗೆ ₹160 ರಿಂದ ₹180 ಇದೆ. ದೆಹಲಿ, ಗೋವಾದ ವ್ಯಾಪಾರಿಗಳು ಪ್ರತಿ ಕೆಜಿಗೆ ₹110ರಂತೆ ಖರೀದಿಸುತ್ತಾರೆ. ಸಾಗಣೆ, ಕಾರ್ಮಿಕರ ವೆಚ್ಚದ ಗೊಡವೆ ಇಲ್ಲ. ಹೀಗಾಗಿ, ಸ್ಥಳೀಯ ಮಾರುಕಟ್ಟೆಗಿಂತಲೂ ಉತ್ತಮ ದರ ಈ ವ್ಯಾಪಾರಿಗಳಿಂದ ಸಿಕ್ಕಿದೆ’ ಎಂದು ಸಾಗರ ಹೇಳುತ್ತಾರೆ.
‘ನಮ್ಮ ಗದ್ದೆಯಲ್ಲಿ ಪ್ರತಿ ದಿನ 45 ಕಾರ್ಮಿಕರು ಕೆಲಸ ಮಾಡುತ್ತಾರೆ. ಪುರುಷರಿಗೆ ದಿನಕ್ಕೆ ₹500, ಮಹಿಳೆಯರಿಗೆ ₹350 ಕೂಲಿ ಇದೆ. ಬಾವಿ ನೀರು ಬಳಸಿ ವರ್ಷದಲ್ಲಿ ಎರಡು ಬಾರಿ ಇಳುವರಿ ಪಡೆಯುತ್ತೇನೆ’ ಎನ್ನುತ್ತಾರೆ ಅವರು.
20 ವರ್ಷಗಳಿಂದ ನಾನು ಬಾಡಿಗೆ ಜಮೀನು ಪಡೆದು ಟೊಮೆಟೊ ಬೆಳೆಯುತ್ತಿದ್ದೇನೆ. ವರ್ಷಪೂರ್ತಿ ಬೆಳೆ ಇರುತ್ತದೆ. ಈ ಬಾರಿ 9 ಎಕರೆಗೆ ₹20 ಲಕ್ಷ ಖರ್ಚು ಮಾಡಿದ್ದೆ. ಹಿಂದಿಗಿಂತಲೂ ಈ ಬಾರಿ ಹೆಚ್ಚು ಲಾಭ ಬಂದಿದೆ–ಸಾಗರ ಗೋಪಾಲ ಮಗದುಮ್ ಟೊಮೆಟೊ ಬೆಳೆಗಾರ ಯಕ್ಸಂಬಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.