ಬೆಳಗಾವಿ: ಕ್ರೀಡಾ ಇಲಾಖೆಯಿಂದ ಕೊಡಮಾಡುವ 2018ನೇ ಸಾಲಿನ ‘ಏಕಲವ್ಯ’ ಪ್ರಶಸ್ತಿಗೆ ಭಾಜನವಾದ ಜುಡೋ ಪಟು ಗೀತಾ ದಾನಪ್ಪಗೋಳ ಅವರನ್ನು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಇಲ್ಲಿನ ಲಿಂಗರಾಜ ಕಾಲೇಜಿನಲ್ಲಿ ಸಂಸ್ಥೆ ಪರವಾಗಿ ಶನಿವಾರ ಗೌರವಿಸಿದರು.
ಗೋಕಾಕ ತಾಲ್ಲೂಕು ನಾಗನೂರದ ಗೀತಾ ಅವರನ್ನುಸಂಸ್ಥೆಯು ಮೂರು ವರ್ಷಗಳಿಂದ ದತ್ತು ಪಡೆದು, ಆರ್ಥಿಕ ನೆರವಿನ ಜೊತೆಗೆ ತರಬೇತಿ ನೀಡುತ್ತಿದೆ.
‘ಯುವತಿಯರು ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ಹೊಂದುತ್ತಿರುವುದು ಹೆಮ್ಮೆಯ ವಿಷಯ. ಗೀತಾ ಭರವಸೆಯ ಕ್ರೀಡಾಪಟು. ಗ್ರಾಮೀಣ ಪರಿಸರದಿಂದ ಬಂದರೂ ದೊಡ್ಡ ಸಾಧನೆ ಮಾಡಿದ್ದಾರೆ. ಕಡುಬಡತನದಲ್ಲಿ ಗೀತಾ ಸವಾಲುಗಳನ್ನು ಸ್ವೀಕರಿಸಿ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ. ಅವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲಿ. ಈ ನಿಟ್ಟಿನಲ್ಲಿ ಸಂಸ್ಥೆಯು ಎಲ್ಲ ರೀತಿಯ ಸಹಾಯ ನೀಡಲಿದೆ’ ಎಂದು ಕೋರೆ ತಿಳಿಸಿದರು.
ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎಂ. ಪಾಟೀಲ, ಎಂ.ಆರ್. ಬನಹಟ್ಟಿ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ, ದೈಹಿಕ ಶಿಕ್ಷಣ ನಿರ್ದೇಶಕಡಾ.ಸಿ.ರಾಮರಾವ್ ಹಾಗೂ ಸಿಬ್ಬಂದಿ ಇದ್ದರು.