ಮುಗಳಖೋಡ (ಬೆಳಗಾವಿ ಜಿಲ್ಲೆ): ‘ಉತ್ತರ ಕರ್ನಾಟಕದಲ್ಲಿರುವ ಮಾಜಿ ದೇವದಾಸಿಯರ ನೋವಿಗೆ ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು’ ಎಂದು ಲಲಿತಕಲಾ ಅಕಾಡೆಮಿ ಸದಸ್ಯ ಜಯಾನಂದ ಮಾದರ ಆಗ್ರಹಿಸಿದರು.
ರಾಯಬಾಗ ತಾಲ್ಲೂಕಿನ ಹಂದಿಗುಂದ ಗ್ರಾಮದಲ್ಲಿ ಮಾಜಿ ದೇವದಾಸಿಯರ ಜೊತೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ತಳ ಸಮುದಾಯಗಳ ಮಹಿಳೆಯರನ್ನು ದೇವರು ಮತ್ತು ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುವ ಮೂಲಕ ದೇವದಾಸಿಯರನ್ನಾಗಿ ಪರಿವರ್ತಿಸಲಾಗಿದೆ. ಹೆಣ್ಣಿನ ಕುಲಕ್ಕೆ ಕಳಂಕ ತರುವಂತಹ ಆಚರಣೆ ನಡೆದುಕೊಂಡು ಬಂದಿರುವುದು ವಿಷಾದನೀಯ. ದೇವದಾಸಿಯಾಗಿದ್ದವರ ಮಕ್ಕಳು ಸಮಾಜದಲ್ಲಿ ಗೌರವದ ಜೀವನ ರೂಪಿಸಿಕೊಳ್ಳಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದರು.
ಕವಿ ಅಲ್ಲಾಗಿರಿರಾಜ್ ಕನಕಗಿರಿ ಮಾತನಾಡಿ, ‘ಮಾಜಿ ದೇವದಾಸಿಯರಿಗೆ ಪಿಂಚಣಿ ನೀಡುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೆ, ಅವರ ಮಕ್ಕಳ ಬದುಕಿನ ಭವಿಷ್ಯ ಕಟ್ಟುವಲ್ಲಿ ಕ್ರಮ ವಹಿಸದಿರುವುದು ಶೋಚನೀಯ ಸಂಗತಿ’ ಎಂದು ಹೇಳಿದರು.
‘ಸರ್ಕರ ಕೂಡಲೇ ದೇವದಾಸಿಯರ ಮಕ್ಕಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಮನೆ ಮತ್ತು ಕೃಷಿ ಮಾಡಲು ಭೂಮಿಯನ್ನು ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.