ನಮ್ಮನ್ನೆಲ್ಲ ಬಿಟ್ಟು ಹೋದ: ‘ಮಲಪ್ರಭೆ ನದಿದಂಡೆ ಮೇಲೆ ನಮ್ಮ ಕೃಷಿಭೂಮಿ ಇದೆ. ಈ ಭಾಗದಲ್ಲಿ ಮದುವೆ ಸಮಾರಂಭಕ್ಕೆ ಬಂದಿದ್ದ ನಾಲ್ಕು ಹುಡುಗರು ಈ ಹಿಂದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇಲ್ಲಿ ಆಗಾಗ ಇಂಥ ಘಟನೆ ನಡೆಯುತ್ತಲೇ ಇವೆ. ನದಿಗೆ ಬಂದಾಗ, ಯಾರಿಗೆ ತೊಂದರೆಯಾದರೂ ಶ್ರೀಶೈಲ ನೆರವಿಗೆ ಓಡುತ್ತಿದ್ದ. ಭಾನುವಾರ ಬಾಲಕನೊಬ್ಬ ಈಜಲು ಹೋಗಿ ಮುಳುಗುತ್ತಿದ್ದ. ಅವನ ರಕ್ಷಣೆಗೆ ಹೋಗಿದ್ದ ಯುವಕನೂ ಸಂಕಷ್ಟಕ್ಕೆ ಸಿಲುಕಿದ್ದ. ಅವರಿಬ್ಬರನ್ನು ನನ್ನ ತಮ್ಮ ದಡಕ್ಕೆ ತಂದ. ಆದರೆ, ತಾನೇ ನಮ್ಮನ್ನೆಲ್ಲ ಬಿಟ್ಟು ಹೋದ’ ಎಂದು ನಾಗರಾಜ ಕಣ್ಣೀರು ಸುರಿಸಿದರು.
‘ನನ್ನ ತಮ್ಮ ರಕ್ಷಿಸಿದ ಬಾಲಕ ಈ ಹಿಂದೆಯೂ ಸಂಕಷ್ಟಕ್ಕೆ ಸಿಲುಕಿ, ಪಾರಾಗಿ ಬಂದಿದ್ದ. ಮುಂದೆ ಹೀಗಾಗಬಾರದು. ಪಾಲಕರೂ ತಮ್ಮ ಮಕ್ಕಳ ರಕ್ಷಣೆಗೆ ಒತ್ತು ನೀಡಬೇಕು’ ಎಂದು ಮನವಿ ಮಾಡಿದರು.
‘ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದ ಶ್ರೀಶೈಲ, ಸಾಮಾಜಿಕ ಕಾಯಕದಲ್ಲಿ ಮುಂದಿರುತ್ತಿದ್ದ. ತಾನು ಪ್ರಾಣ ಬಿಟ್ಟರೂ, ಇಬ್ಬರನ್ನು ರಕ್ಷಿಸಿದ ಶ್ರೀಶೈಲ ಸಾಹಸವನ್ನು ಸರ್ಕಾರ ಗುರುತಿಸಬೇಕು’ ಎಂಬ ಒತ್ತಾಯ ಗ್ರಾಮಸ್ಥರದ್ದು.