ಬೆಳಗಾವಿ: ನಗರದಲ್ಲಿ ಮಂಗಳವಾರ ಸಂಜೆ ಒಂದೂವರೆ ತಾಸಿಗೂ ಹೆಚ್ಚು ಕಾಲ ಭಾರಿ ಗುಡುಗು–ಗಾಳಿ ಸಹಿತ ಸುರಿದ ಜೋರು ಮಳೆ, ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪೆರೆಯಿತು.
ಸಂಜೆ 4ರ ಸುಮಾರಿಗೆ ಸಾಧಾರಣ ಮಳೆ ಆರಂಭವಾಯಿತು. ಬಳಿಕ ಜೋರಾಯಿತು. ಗುಡುಗಿನ ಮೊರೆತವೂ ಹೆಚ್ಚಾಗಿತ್ತು. ಕೊರೊನಾ ವೈರಾಣು ಸೋಂಕು ಹರಡುವ ಭೀತಿಯ ನಡುವೆಯೂ ರಸ್ತೆಗಳಲ್ಲಿ ಓಡಾಡುತ್ತಿದ್ದವರಿಗೆ ಮಳೆ ‘ಬ್ರೇಕ್’ ಹಾಕಿತು.
ಗಾಳಿ, ಮಳೆಯ ರಭಸಕ್ಕೆ ಶಾಹೂನಗರ ಮುಖ್ಯರಸ್ತೆಯ ಮೆಡಿಕಲ್ ಸ್ಟೋರ್ ಬಳಿ ಮರದ ದೊಡ್ಡ ಕೊಂಬೆಯೊಂದು ಮುರಿದುಬಿದ್ದಿತು. ಅದೇ ಬಡಾವಣೆಯ ಮನೆಯೊಂದರ ಮುಂದಿದ್ದ ದೊಡ್ಡ ಮರ ಉರುಳಿಬಿದ್ದಿದ್ದರಿಂದ ದ್ವಿಚಕ್ರವಾಹನ ಹಾಗೂ ಕಾರು ಜಖಂಗೊಂಡಿತು. ಜನಸಂಚಾರ ಇರಲಿಲ್ಲವಾದ್ದರಿಂದ ಪ್ರಣಾಪಾಯ ಸಂಭವಿಸಿಲ್ಲ.
ಬೈಲಹೊಂಗಲ, ಹಿರೇಬಾಗೇವಾಡಿ ಹಾಗೂ ಸವದತ್ತಿಯಲ್ಲಿ ತುಂತುರು ಮಳೆಯಾಯಿತು.
ತಂಪೆರೆದ ಮೊದಲ ಮಳೆ ವಿಜಯಪುರ: ನಗರದ ಹಲವೆಡೆ ಮಂಗಳವಾರ ಸಂಜೆ ಸುರಿದ ಮೊದಲ ಮಳೆ ತಂಪೆರೆಯಿತು. ಮಧ್ಯಾಹ್ನ 35 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು. ಸಂಜೆ ಇದ್ದಕ್ಕಿದ್ದಂತೆ ಗುಡುಗಿನ ಅಬ್ಬರದೊಂದಿಗೆ 15 ನಿಮಿಷ ಮಳೆ ಸುರಿಯುತು.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಉಳಿದಿದ್ದರು. ಸಂಜೆ ಮಳೆಯಾಗುತ್ತಿದ್ದಂತೆ ಕೆಲವರು ಹೊರ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿದರು.
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ಕೆಲವೆಡೆ ಗುಡುಗು ಸಹಿತ ಮಳೆ ಶುರುವಾಗಿದೆ. ಎನ್.ಆರ್.ಪುರ, ಕಳಸ, ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ ಭಾಗದಲ್ಲಿ ಮಳೆಯಾಗುತ್ತಿದೆ. ಚಿಕ್ಕಮಗಳೂರಿಲ್ಲಿ ಮೋಡಗಟ್ಟಿದ ವಾತಾವರಣ, ಗುಡುಗಿನ ಆರ್ಭಟ ಇದೆ.