ಬೆಳಗಾವಿ: ನರೇಗಾ ಯೋಜನೆಯಡಿ ಇಲ್ಲಿಗೆ ಸಮೀಪದ ಸಾಂಬ್ರಾದಲ್ಲಿರುವ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿರುವ 500 ಕಾರ್ಮಿಕರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಂಗಳವಾರ ಸಸಿ ವಿತರಿಸಿದರು. ಲಕ್ಷ್ಮಿ ತಾಯಿ ಫೌಂಡೇಷನ್ ಮೂಲಕ ಸುಮಾರು 20,000 ಸಸಿ ವಿತರಿಸುವ ಯೋಜನೆ ಹಾಕಿಕೊಂಡಿದ್ದಾರೆ.
‘ವರ್ಷದಿಂದ ವರ್ಷಕ್ಕೆ ಬರಗಾಲ ತೀವ್ರವಾಗುತ್ತಿದೆ. ಅಂತರ್ಜಲ ಕಡಿಮೆಯಾಗುತ್ತಿದೆ. ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯಲು ಹನಿ ನೀರು ಕೂಡ ಸಿಗುವುದಿಲ್ಲ. ಏನೇ ಆಸ್ತಿ ಮಾಡದಿದ್ದರೂ ಗಿಡಗಳನ್ನಾದರೂ ನೆಡುವ ಮೂಲಕ ಮುಂದಿನ ಪೀಳಿಗೆಗೆ ದೊಡ್ಡ ಆಸ್ತಿ ಮಾಡಿಟ್ಟು ಹೋಗಬೇಕು. ಹಾಗಾಗಿ ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು’ ಎಂದು ಲಕ್ಷ್ಮಿ ಹೇಳಿದರು.
ಮಾರಿಹಾಳ ಪೊಲೀಸ್ ಇನ್ಸ್ಪೆಕ್ಟರ್ ವಿಜಯಕುಮಾರ ಸಿನ್ನೂರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ ದೇಸಾಯಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ, ಇದುವರೆಗೆ 5 ಸಾವಿರಕ್ಕಿಂತ ಹೆಚ್ಚು ಹೆರಿಗೆ ಮಾಡಿಸಿರುವ 107 ವಯಸ್ಸಿನ ಸೂಲಗಿತ್ತಿ ಸಾಂಬ್ರಾದ ಪಣಿಮಾ ತಾನ್ಸೆವಾಲೆ ಅವರನ್ನು ಲಕ್ಷ್ಮಿ ಸನ್ಮಾನಿಸಿದರು.