ಬೆಳಗಾವಿ: ‘ಹಿಂದಿಯು ದೇಶದ ಪ್ರಮುಖ ಸಂವಹನ ಭಾಷೆಯಾಗಿದೆ’ ಎಂದು ಹಿಂದೂಸ್ಥಾನಿ ಪ್ರಚಾರ ಸಭಾದ ನಿರ್ದೇಶಕ ಸಂಜೀವ ನಿಗಮ ಹೇಳಿದರು.
ಇಲ್ಲಿನ ಆರ್ಪಿಡಿ ಕಾಲೇಜಿನ ಹಿಂದಿ ವಿಭಾಗ ಹಾಗೂ ಹಿಂದೂಸ್ಥಾನಿ ಪ್ರಚಾರ ಸಭಾದಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಯಾವುದೇ ಮೂಲೆಯಲ್ಲೂ ಸಂವಹನದ ಭಾಷೆಯನ್ನಾಗಿ ಹಿಂದಿ ಬಳಸಬಹುದಾಗಿದೆ. ಭಾಷೆಯು ಜನರ ನಡುವೆ ತಾರತಮ್ಯ ತರಬಾರದು. ಅದು ಜನರನ್ನು ಹತ್ತಿರ ತರುವ ಕಾರ್ಯ ಮಾಡುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಕೆ.ಇ. ಸೊಸೈಟಿ ಅಧ್ಯಕ್ಷ ಸೇವಂತಿಲಾಲ್ ಷಾ ಮಾತನಾಡಿ, ‘ಪುಸ್ತಕದ ಜ್ಞಾನ ಹೊಂದಿದ್ದರೆ ಸಾಲದು. ಸಾಮಾನ್ಯ ಜ್ಞಾನವು ಅಷ್ಟೇ ಪ್ರಮುಖವಾಗಿದೆ’ ಎಂದು ತಿಳಿಸಿದರು.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾರ್ಯಕ್ರಮ ಸಂಯೋಜನಾ ಪ್ರಮುಖ ರಾಕೇಶ ಕುಮಾರ ತ್ರಿಪಾಠಿ ಮಾತನಾಡಿದರು.
ಹಿಂದಿ ವಿಭಾಗದ ಸಹ ಪ್ರಾಧ್ಯಾಪಕ ವಿಜಯಕುಮಾರ ಪಾಟೀಲ ಇದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಅಚಲಾ ದೇಸಾಯಿ, ಹಿಂದಿ ವಿಭಾಗದ ಪ್ರಮುಖ ಡಾ.ರಾಜೇಂದ್ರ ಪವಾರ ಪರಿಚಯಿಸಿದರು. ಸ್ಪರ್ಧೆಯ ನಿರ್ಣಾಯಕರಾಗಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಡಾ.ಪಿ. ಶ್ರೀನಿವಾಸ ರಾವ್ ಹಾಗೂ ಸಂತ ಪಾಲ್ಸ್ ಕಾಲೇಜಿನ ಹಿಂದಿ ವಿಭಾಗದ ಪ್ರಮುಖ ಡಾ.ಪಿ.ಬಿ. ನೀಲು ಪಾಲ್ಗೊಂಡಿದ್ದರು.
ಭರತಕುಮಾರ ರಿಡಿಕಲ್ ಪ್ರಥಮ (₹ 5ಸಾವಿರ), ಆರತಿ ವಸಂತ ಬಾಲೇಕರ ದ್ವಿತೀಯ (₹ 4ಸಾವಿರ), ಅಂಜಲಿ ಅಷ್ಟೇಕರ ತೃತೀಯ (₹ 3ಸಾವಿರ), ಆರತಿ ನಾಯಿಕ, ಮಧು ಜಾದವ, ಧನಶ್ರೀ ಖೋರಾಟೆ, ಭಾವನಾ ಪಾಟೀಲ (ತಲಾ 1500) ಸಮಾಧಾನಕರ ಬಹುಮಾನ ಪಡೆದರು.
ದೇವಯಾನಿ, ಧನಶ್ರೀ ಮತ್ತು ಶಿವಾನಿ ನಿರೂಪಿಸಿದರು. ವೈಷ್ಣವಿ ಸ್ವಾಗತ ಗೀತೆ ಹಾಡಿದರು. ಡಾ.ಅಜಿತ ಕೋಳಿ ವಂದಿಸಿದರು.