ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಒಂದು ಮನೆ ಹಾಗೂ ನಾಲ್ಕು ಬಿದಿರಿನ ಗಡ್ಡೆಗಳು ಸುಟ್ಟುಹೋಗಿವೆ.
ಅರುಣ ಮೇದಾರ, ಕುಮಾರ ಮೇದಾರ, ಚಿದಾನಂದ ಮೇದಾರ ಅವರಿಗೆ ಸೇರಿದ ಬಿದಿರನ ಗಡ್ಡೆಗಳು ಸಂಪೂರ್ಣ ಕರಕಲಾಗಿವೆ. ಪಕ್ಕದಲ್ಲಿದ್ದ ಬಿದಿರಿನ ವ್ಯಾಪಿಸಿಕೊಂಡ ಬೆಂಕಿ ವ್ಯಾಪಿಸಿ ಅಂಗಡಿಯಲ್ಲಿದ್ದ ಸಾಮಗ್ರಿಗಳೂ ಸುಟ್ಟಿವೆ. ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಾಗಿದ್ದು, ಒಂದು ಮನೆ ಭಾಗಶಃ ಸುಟ್ಟಿದೆ.
ತಡರಾತ್ರಿ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ ಚೌಗಲಾ, ಬಿ.ಎಸ್. ತಳವಾರ, ಪಿಎಸ್ಐ ಕೆ.ಬಿ. ಜಕ್ಕನ್ನವರ ಸ್ಥಳ ಪರಿಶೀಲನೆ ನಡೆಸಿದರು. ಅಂಕಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಘಟನೆಯಿಂದ ಲಕ್ಷಾಂತರ ಮೌಲ್ಯದ ಆಸ್ತಿ ಭಸ್ಮವಾಗಿದೆ. ಆದರೆ, ಪ್ರಾಣಾಪಾಯ ಸಂಭವಿಸಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.