ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿದ ಪ್ರಕರಣದ ಬಗ್ಗೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ್ ಮೀನಾ ಅವರು ಸೋಮವಾರ ಇಡೀ ದಿನ ವಿಚಾರಣೆ ಮಾಡಿದರು.
ಇಲ್ಲಿನ ಜಿಲ್ಲಾಸ್ಪತ್ರೆಯ ‘ಸಖಿ’ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಭೇಟಿ ಮಾಡಿದ ಅವರು ಎರಡು ತಾಸು ಮಾಹಿತಿ ಕಲೆಹಾಕಿದರು. ಪೊಲೀಸ್ ತನಿಖೆ ವರದಿ, ವೈದ್ಯಕೀಯ ವರದಿ ಪಡೆದುಕೊಂಡು ಹೇಳಿಕೆಗಳನ್ನೂ ದಾಖಲಿಸಿಕೊಂಡರು.
ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸುನೀಲಕುಮಾರ್ ಮೀನಾ, ‘ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಬಗ್ಗೆ ತನಿಖೆ ನಡೆಸಿದ್ದೇನೆ. ಸಂಪೂರ್ಣ ಮಾಹಿತಿ ಪಡೆದಿದ್ದು, ವರದಿ ಸಿದ್ಧಪಡಿಸಿ ಆಯೋಗದ ಮುಂದೆ ಇಡುತ್ತೇನೆ. ನಂತರದ ನಿರ್ಧಾರವನ್ನು ಆಯೋಗ ತೆಗೆದುಕೊಳ್ಳಲಿದೆ’ ಎಂದರು.
ಇದಕ್ಕೂ ಮುನ್ನ ಅವರು ಘಟನೆ ನಡೆದ ಹೊಸ ವಂಟಮೂರಿ ಗ್ರಾಮಕ್ಕೆ ಭೇಟಿ ನೀಡಿದರು. ಸಂತ್ರಸ್ತೆಯ ಮನೆ, ಆರೋಪಿಗಳ ಮನೆ, ಮಹಿಳೆಯನ್ನು ಬೆತ್ತಲೆಯಾಗಿ ಕಟ್ಟಿಹಾಕಿದ ಸ್ಥಳ... ಪ್ರತಿಯೊಂದನ್ನೂ ಪರಿಶೀಲಿಸಿದರು.
ವರದಿ ಪಡೆದ ಸಿಐಡಿ: ಸಿಐಡಿಯ ಪ್ರಭಾರ ಡಿಐಜಿ ಸುಧೀರಕುಮಾರ ರೆಡ್ಡಿ ಅವರ ನೇತೃತ್ವದ ತಂಡ ಸೋಮವಾರ ಘಟನೆಯ ಕುರಿತು ಪೂರ್ಣ ಪ್ರಮಾಣದ ಮಾಹಿತಿ ಕಲೆಹಾಕಿತು.
ನಗರದ ಖಾಸಗಿ ಅತಿಥಿಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸುಧೀರಕುಮಾರ ರೆಡ್ಡಿ ಅವರು, ಸಂತ್ರಸ್ತೆ ಹಾಗೂ ಅವರ ಕುಟುಂಬದವರ ಮಾಹಿತಿ ಕಲೆಹಾಕಿದರು. ಘಟನಾವಳಿಯ ದಾಖಲೆಗಳನ್ನು ಪರಿಶೀಲಿಸಿದರು. ಈ ವೇಳೆ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳೂ ಹಾಜರಿದ್ದರು.
ಸಿಐಡಿ ಇಬ್ಬರು ಎಸ್ಪಿಗಳಾದ ಪೃಥ್ವಿಕ್, ರಶ್ಮಿ ಪರಡ್ಡಿ ಹಾಗೂ ಡಿವೈಎಸ್ಪಿ ಅಂಜುಮಾಲಾ ನಾಯಕ ಸೇರಿ 6 ಜನರ ತಂಡ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದೆ.
ಭಾನುವಾರವೇ ಬೆಳಗಾವಿಗೆ ಬಂದು ಬೀಡು ಬಿಟ್ಟಿರುವ ಈ ತಂಡ, ಮಂಗಳವಾರ (ಡಿ.19) ಹೊಸ ವಂಟಮೂರಿ ಗ್ರಾಮ ಹಾಗೂ ಜಿಲ್ಲಾಸ್ಪತ್ರೆಗೆ ತೆರಳಿ ಸಂತ್ರಸ್ತೆ ಹಾಗೂ ಅವರ ಕುಟುಂಬದವರಿಂದ ಮಾಹಿತಿ ಸಂಗ್ರಹಿಸಲಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿದ ಪ್ರಕರಣದ ವಿಚಾರಣೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ್ ಮೀನಾ ಅವರು ಸೋಮವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು
-ಪ್ರಜಾವಾಣಿ ಚಿತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.