ಬೆಳಗಾವಿ: ‘ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವುದು, ಈಗಾಗಲೇ ಎನ್ಐಎ ಹಾಗೂ ಭಯೋತ್ಪಾದನಾ ಪ್ರಕರಣಗಳಲ್ಲಿ ಖುಲಾಷೆಯಾದವರ ಮೇಲ ನಿಗಾ ವಹಿಸುವುದು ಮತ್ತು ಶಿಕ್ಷೆ ಪೂರ್ಣಗೊಳಿಸಿದವರ ಚಲನವಲನಗಳ ಮೇಲೆ ಕಣ್ಣಿಡುವುದು ನಮ್ಮ ಪ್ರಮುಖ ಕೆಲಸವಾಗಿದೆ’ ಎಂದು ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥ ಭಾಸ್ಕರ್ ರಾವ್ ತಿಳಿಸಿದರು.
ಇಲ್ಲಿನ ಆಂತರಿಕ ಭದ್ರತಾ ವಿಭಾಗದ ಕಚೇರಿಗೆ ಭೇಟಿ ಹಾಗೂ ಹಿಂಡಲಗಾ ಜೈಲಿನ ಭದ್ರತೆ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
‘ಮಾದಕ ವಸ್ತುಗಳು, ಶಸ್ತ್ರಾಸ್ತ್ರ, ಟ್ರಾವೆಲ್ ಏಜೆನ್ಸಿಗಳು, ಅಕ್ರಮವಾಗಿ ಹೊರಗಡೆ ಹೋಗಲು ಪ್ರಯತ್ನ ಮಾಡುವವರ ಬಗ್ಗೆ ನಿಗಾ ಇಡುತ್ತಿದ್ದೇವೆ. ರಾಜ್ಯದ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ನಡೆಸುತ್ತಿರುತ್ತೇವೆ’ ಎಂದು ಹೇಳಿದರು.
‘ಇಲಾಖೆಯನ್ನು ಶಕ್ತಗೊಳಿಸಲು ಸಿಬ್ಬಂದಿಗೆ ಹೆಚ್ಚಿನ ತರಬೇತಿ ನೀಡಲಾಗುವುದು’ ಎಂದರು.
‘ನಗರದಲ್ಲಿ ಈಗಿರುವ ಕಚೇರಿ ಸ್ಥಳಾಂತರಿಸಿ, ಸಾರ್ವಜನಿಕರಿಗೆ ಗೊತ್ತಾಗುವ ರೀತಿಯಲ್ಲಿ ಪ್ರಮುಖ ಸ್ಥಳದಲ್ಲಿ ಕಚೇರಿ ಆರಂಭಿಸಬೇಕು. ಯಾವ್ಯಾವ ವಿಷಯಗಳಲ್ಲಿ ದೂರು ದಾಖಲಿಸಬಹುದು ಎನ್ನುವುದನ್ನು ಪ್ರಚಾರ ಮಾಡಬೇಕು ಎಂದು ಸೂಚಿಸಿದ್ದೇನೆ’ ಎಂದು ತಿಳಿಸಿದರು.
‘ರಾಜ್ಯದ ಆರು ವಿಮಾನನಿಲ್ದಾಣಗಳು, ವಿದ್ಯುತ್ ಸ್ಥಾವರಗಳು, ಜಲಾಶಯಗಳಿಗೆ ಕೈಗಾರಿಕಾ ಭದ್ರತಾ ಪಡೆಯಿಂದ ಭದ್ರತೆ ಒದಗಿಸುತ್ತಿದ್ದೇವೆ’ ಎಂದು ತಿಳಿಸಿದರು.
‘ಕೇಂದ್ರದ ಎನ್ಐಎ ರೀತಿಯಲ್ಲಿ ಐಎಸ್ಡಿ ಮಾಡಬಹುದಾಗಿದೆ. ದೇಶ ವಿರೋಧಿ ಚಟುವಟಿಕೆಗಳ ಮೇಲೆ ಕಣ್ಣಿಡುವ ಪ್ರಮುಖ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ತಕ್ಕಂತೆ ಸರ್ಕಾರ ಮುಕ್ತವಾದ ಅವಕಾಶ ನೀಡಿದೆ. ಸಿಎಸ್ಐಎಫ್ ಜೊತೆ ಸೇರಿ ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತೇವೆ. ಭದ್ರತೆ ಒದಗಿಸುವಂತೆ ಹಣಕಾಸು ಸಂಸ್ಥೆಗಳ ಕಡೆಯಿಂದ ಬಹಳ ಬೇಡಿಕೆ ಬರುತ್ತಿದೆ. ಸಿಎಸ್ಐಎಫ್ ಬೇಕಾದರೆ ದುಬಾರಿಯಾಗುತ್ತದೆ. ಹೀಗಾಗಿ, ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಬೇಕು ಎಂದು ಕೋರುತ್ತಿವೆ. ಈ ಪ್ರಸ್ತಾವ ಸರ್ಕಾರ ಮುಂದಿದೆ’ ಎಂದು ಹೇಳಿದರು.
ನಂತರ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.