ಬೆಳಗಾವಿ: ‘ಭೌತಿಕ ವಸ್ತುಗಳ ಬಾಳಿಕೆ ಪ್ರಮಾಣವನ್ನು ಮುಂಚಿತವಾಗಿ ನಿರ್ಧರಿಸುವ ಸಂಶೋಧನೆಗೆ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ’ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ. ದತ್ತಗುರು ಹೇಳಿದರು.
ಇಲ್ಲಿನ ವಿಟಿಯು, ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಸ್ಟ್ರಕ್ಚರಲ್ ಇಂಟಿಗ್ರಿಟಿ ಆಂಡ್ ಫೆಲ್ಯೂವರ್ ಸ್ಟಡೀಸ್ ಹಾಗೂ ಡಿಎಚ್ಐಒ ಸೆಂಟರ್ ಫಾರ್ ಎಕ್ಸ್ಲನ್ಸ್ ವತಿಯಿಂದ ಆಯೋಜಿಸಿರುವ ‘ಫಟಿಗ್, ಡುರೆಬಿಲಿಟಿ ಇಂಡಿಯಾ 2019’ ಅಂತರರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಏರೊಸ್ಪೇಸ್, ಸಿವಿಲ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭೌತಿಕ ವಸ್ತುಗಳ ಬಾಳಿಕೆ ಪ್ರಮಾಣ ಅಂದಾಜಿಸುವುದು ಬಹಳ ಪ್ರಾಮುಖ್ಯತೆ ಗಳಿಸುತ್ತದೆ. ಈ ಕುರಿತು ಅರಿವು ಇರಬೇಕಾಗುತ್ತದೆ. ಈ ತಂತ್ರಜ್ಞಾನದ ಅಳವಡಿಕೆ ವಿಷಯಗಳಲ್ಲಿ ಶಿಕ್ಷಣ ತಜ್ಞರು ಹಾಗೂ ಕೈಗಾರಿಕಾ ರಂಗದ ತಂತ್ರಜ್ಞರು ವಿಚಾರ ವಿನಿಮಯ ಮಾಡಿಕೊಳ್ಳಲು ಸಮ್ಮೇಳನ ಒಳ್ಳೆಯ ವೇದಿಕೆಯಾಗಿದೆ’ ಎಂದರು.
ಇನ್ಸ್ಟಿಟ್ಯೂಟ್ ಆಫ್ ಸ್ಟ್ರಕ್ಚರಲ್ ಇಂಟಿಗ್ರಿಟಿ ಆಂಡ್ ಫೆಲ್ಯೂವರ್ ಸ್ಟಡೀಸ್ ತಾಂತ್ರಿಕ ನಿರ್ದೇಶಕ ಡಾ.ಎಸ್. ಸೀತಾರಾಮನ್ ಮಾತನಾಡಿ, ‘ಇತ್ತೀಚಿಗೆ ಕೈಗಾರಿಕ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಇದಕ್ಕೆ ಪರಿಹಾರವಾಗಿ ಬಹುವಿಧ ತಾಂತ್ರಿಕ ಶಿಕ್ಷಣದ ಅಳವಡಿಕೆ ಅವಶ್ಯವಿದೆ. ಎಲ್ಲ ತಾಂತ್ರಿಕ ಕಾಲೇಜುಗಳಲ್ಲೂ ಅಂತರಶಿಸ್ತೀಯ ತಾಂತ್ರಿಕ ಶಿಕ್ಷಣದ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ‘ಆರ್ಥಿಕತೆಯ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ಭೌತಿಕ ವಸ್ತುಗಳನ್ನು ತಯಾರಿಸುವುದು ಅವಶ್ಯವಾಗಿದೆ. ಬೇಸಿಕ್ ಮೆಕ್ಯಾನಿಕ್ಸ್, ಮೆಟೀರಿಯಲ್ಸ್ ಮ್ಯಾನ್ಯುಫ್ಯಾಕ್ಚರಿಂಗ್, ಸ್ಟ್ರಕ್ಚರಲ್ ಎಂಜಿನಿಯರಿಂಗ್, ಏರೊಸ್ಪೆಸ್ ಎಂಜಿನಿಯರಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಅನೇಕ ಸವಾಲುಗಳಿವೆ. ಈ ಕ್ಷೇತ್ರಗಳಲ್ಲಿ ಯುವ ಎಂಜಿನಿಯರ್ಗಳು ಸಂಶೋಧನೆಗೆ ಮುಂದಾಗಬೇಕು’ ಎಂದು ತಿಳಿಸಿದರು.
ಇನ್ಸ್ಟಿಟ್ಯೂಟ್ ಆಫ್ ಸ್ಟ್ರಕ್ಚರಲ್ ಇಂಟಿಗ್ರಿಟಿ ಆಂಡ್ ಫೆಲ್ಯೂವರ್ ಸ್ಟಡೀಸ್ ತಾಂತ್ರಿಕ ನಿರ್ದೇಶಕ ಡಾ.ಟಿ. ಜಗದೀಶ ಸ್ವಾಗತಿಸಿದರು. ಕುಲಸಚಿವ ಡಾ.ಆನಂದ ಎಸ್. ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕ ಡಾ.ಆರ್.ಆರ್. ಮಾಳಗಿ ವಂದಿಸಿದರು.
ಅಮೆರಿಕ, ಸ್ಪೇನ್,ದೇಶದ ವಿವಿಧ ಭಾಗಗಳ 500 ಪ್ರತಿನಿಧಿಗಳು ಮೂರು ದಿನಗಳ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.