ಬೆಳಗಾವಿ: ‘ಮರಾಠ ಸಮಾಜದ ಅಭಿವೃದ್ಧಿ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಾಧಿಕಾರ ರಚಿಸಿದ್ದಾರೆ. ಇದು ಸಮಾಜ ಒಡೆಯುವ ಕೆಲಸ ಅಲ್ಲ. ಭಾಷೆ ಆಧಾರದ ಮೇಲೆ ರಚಿಸಿದ್ದೂ ಅಲ್ಲ. ಕನ್ನಡಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿರುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇನೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗಲೂ ಬ್ರಾಹ್ಮಣ ಸಮಾಜ ಸೇರಿದಂತೆ ಹಲವು ಸಮಾಜಗಳ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದಾರೆ. ಕಾಂಗ್ರೆಸ್ನವರು ಈಗ ಉಪದೇಶ ಮಾಡುವ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದರು.
‘ಘೋಷಣೆ ಮಾಡುವುದು ಮುಖ್ಯ. ಬಳಿಕ ಖಂಡಿತವಾಗಿಯೂ ಅನುದಾನ ದೊರೆಯುತ್ತದೆ. ಜೆ.ಎಚ್. ಪಟೇಲರ ಕಾಲದಲ್ಲಿ ಜಿಲ್ಲೆಗಳನ್ನು ಘೋಷಿಸಿದ್ದರು. ಆದರೆ, ಅವುಗಳಿಗೆ ಅನುದಾನವನ್ನು ನಮ್ಮ ಸರ್ಕಾರ ಕೊಟ್ಟಿತು. ನಾನು ಮುಖ್ಯಮಂತ್ರಿ ಇದ್ದಾಗ 43 ತಾಲ್ಲೂಕು ಘೋಷಣೆ ಮಾಡಿದ್ದೆವು. ಮುಂದಿನ ಸರ್ಕಾರ ಅನುದಾನ ನೀಡಿತು’ ಎಂದರು.