ಬೆಳಗಾವಿ: ‘ಕೋವಿಡ್ ಭೀತಿಯಲ್ಲೂ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ವಿಮೆ ರಕ್ಷಣೆ ಒದಗಿಸಬೇಕು. ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಇಲ್ಲಿನ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
‘ಕೊರೊನಾ ವೈರಸ್ನ ಹಾವಳಿ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಜಾಗೃತಿ ಮೂಡಿಸಲು, ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಮುದ್ರಣ ಮತ್ತು ದೃಶ್ಯ ಮಾಧ್ಯಮ ಪ್ರತಿನಿಧಿಗಳು ಜೀವದ ಹಂಗು ತೊರೆದು ಶ್ರಮಿಸಿದ್ದಾರೆ. ಕೆಲವರು ಕೋವಿಡ್–19ನಿಂದ ಸಾವಿಗೀಡಾಗಿದ್ದಾರೆ. ಪತ್ರಕರ್ತರು ಹಾಗೂ ಕುಟುಂಬದವರಿಗೆ ವಿಶೇಷ ಆರೋಗ್ಯ ವಿಮೆ ಕಲ್ಪಿಸಬೇಕು’ ಎಂಉ ಒತ್ತಾಯಿಸಿದರು.
‘ಕೋವಿಡ್ ಲಸಿಕೆಯನ್ನು ಕೊರೊನಾ ಯೋಧರ ಜೊತೆಯಲ್ಲಿ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆದ್ಯತೆ ಮೇರೆಗೆ ನೀಡಬೇಕು’ ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ಸುರೇಶ ನೇರ್ಲಿ, ಅರುಣ ಯಳ್ಳೂರಕರ, ಜಗದೀಶ ವಿರಕ್ತಮಠ, ಸಹದೇವ ಮಾನೆ, ಮಹಾಂತೇಶ ಕುರಬೇಟ, ಅನಿಲ ಕಾಜಗಾರ, ಏಕನಾಥ ಅಗಸಿಮನಿ, ಲಗಮಣ್ಣ ಸಣ್ಣಲಚ್ಚಪ್ಪಗೊಳ, ಅಡಿವೆಪ್ಪ ಪಾಟೀಲ, ಸುಬಾನಿ ಮುಲ್ಲಾ, ಸುನೀಲ ಗಾವಡೆ, ಗಂಗಾಧರ ಪಾಟೀಲ, ಸೋಮು ಮಾಳಕನವರ ಇದ್ದರು.