ಬೆಳಗಾವಿ: ‘ಎಸ್.ಜಿ.ಬಾಳೇಕುಂದ್ರಿ ಬೆಳಗಾವಿ ಜಿಲ್ಲೆಯಲ್ಲಿ ಹಲವು ಸೇತುವೆ ನಿರ್ಮಿಸಿದ್ದರು. ಉತ್ತರ ಕರ್ನಾಟಕಕ್ಕೆ ನೀರಾವರಿ ಸೌಕರ್ಯ ಕಲ್ಪಿಸಿದ ಹಿಡಕಲ್, ಆಲಮಟ್ಟಿ, ನವಿಲುತೀರ್ಥ ಮತ್ತು ನಾರಾಯಣಪುರ ಜಲಾಶಯಗಳನ್ನು ನಿರ್ಮಿಸುವಲ್ಲಿ ಅವರ ಸೇವೆ ಸ್ಮರಣೀಯ’ ಎಂದು ನಿವೃತ್ತ ನ್ಯಾಯಾಧೀಶ ಉಲ್ಲಾಸ ಬಾಳೇಕುಂದ್ರಿ ಹೇಳಿದರು.
ಇಲ್ಲಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ 110ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಶತಮಾನ ಕಂಡ ಸಾಹಿತಿ, ನೀರಾವರಿ ತಜ್ಞ ಎಸ್.ಜಿ.ಬಾಳೇಕುಂದ್ರಿ ಬದುಕು–ಬರಹ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂಜಿನಿಯರ್ ಬಸವರಾಜ ಚೆಟ್ಟರ, ‘ಎಸ್.ಜಿ.ಬಾಳೇಕುಂದ್ರಿ ನೀರಾವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಲೋಕೋಪಯೋಗಿ ಇಲಾಖೆ ಮುಖ್ಯ ಸಿವಿಲ್ ಎಂಜಿನಿಯರ್ ಆಗಿದ್ದ ಅವರು, ಉತ್ತರ ಕರ್ನಾಟಕದಲ್ಲಿನ ಹಲವು ಪ್ರದೇಶಗಳ ನೀರಿನ ಅಭಾವ ನೀಗಿಸಿದ್ದರು’ ಎಂದು ಸ್ಮರಿಸಿದರು.
ಸಾಹಿತಿ ಅಶೋಕ ಉಳ್ಳೇಗಡ್ಡಿ ಮಾತನಾಡಿದರು. ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಹಂಜಿ, ಅವಿನಾಶ ಶಿಂಧಿಹಟ್ಟಿ, ಸ.ರಾ.ಸುಳಕೂಡೆ, ಬಿ.ಬಿ.ಮಠಪತಿ, ಆರ್.ಬಿ.ಬನಶಂಕರಿ, ಹೇಮಾ ಸೋನೊಳ್ಳಿ, ಜಯಶೀಲಾ ಬ್ಯಾಕೋಡ, ಬೀನಾ ಕತ್ತಿ ಉಪಸ್ಥಿತರಿದ್ದರು.
ಎಂ.ವೈ.ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮಾವತಿ ಸೊನೊಳ್ಳಿ ಸ್ವಾಗತಿಸಿದರು. ವೀರಭದ್ರಪ್ಪ ಅಂಗಡಿ ಅತಿಥಿ ಪರಿಚಯಿಸಿದರು. ಮಲ್ಲಿಕಾರ್ಜುನ ಕೋಳಿ ನಿರೂಪಿಸಿದರು. ಶಿವಾನಂದ ತಲ್ಲೂರ ವಂದಿಸಿದರು.