ಕೌಜಲಗಿ: ‘ಜಾನಪದ ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ. ಅವರು ಆರ್ಥಿಕವಾಗಿ ಬಡವರಾಗಿದ್ದರೂ ಕಲಾ ಶ್ರೀಮಂತರು’ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಿ.ಕೆ. ನಾವಲಗಿ ಹೇಳಿದರು.
ಇಲ್ಲಿನ ಬಲಭೀಮ ದೇವಸ್ಥಾನ ಆವರಣದಲ್ಲಿ ಜಾನಪದ ಪರಿಷತ್ತಿನ ವತಿಯಿಂದ ಶುಕ್ರವಾರ ನಡೆದ ‘ಕೊರೊನಾ: ಜಾನಪದ ಕಲಾವಿದರ ಬದುಕು-ಒಂದು ಚಿಂತನೆ’ ಹಾಗೂ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸರ್ಕಾರವು ಜಾನಪದ ಕಲಾವಿದರಿಗೆ ₹ 2ಸಾವಿರ ಸಹಾಯಧನ ಕೊಡುತ್ತಿದೆ. ಈಗಾಗಲೆ ಕೆಲವರು ಫಲಾನುಭವಿಗಳಾಗಿದ್ದಾರೆ. ಎಲ್ಲರಿಗೂ ಸಹಾಯಧನ ಬೇಗ ಬಿಡುಗಡೆ ಆಗಬೇಕು’ ಎಂದು ಒತ್ತಾಯಿಸಿದರು.
ಕೌಜಲಗಿ ನಿಂಗಮ್ಮ ಪ್ರತಿಷ್ಠಾನದ ಅಧ್ಯಕ್ಷ ಸುಭಾಸ ಕೌಜಲಗಿ ಮಾತನಾಡಿದರು.
ಗೋಕಾಕ ಪ್ರಭಾ ಶುಗರ್ಸ್ ನಿರ್ದೇಶಕ ಎಂ.ಆರ್. ಭೋವಿ ತಾಳ ನುಡಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ರವಿ ಪರುಶೆಟ್ಟಿ ಕಿಟ್ ವಿತರಿಸಿದರು. ಕೌಜಲಗಿ, ಬೆಟಗೇರಿ, ರಡ್ಡೇರಟ್ಟಿ, ಮನ್ನಿಕೇರಿ, ಗೋಸಬಾಳ, ಬುದ್ನಿ, ನುಗ್ಗಾನಟ್ಟಿ, ಅಕ್ಕಿಸಾಗರ ಗ್ರಾಮಗಳ 100 ಕಲಾವಿದರಿಗೆ ಕಿಟ್ ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಪಿಕೆಪಿಎಸ್ ಅಧ್ಯಕ್ಷ ಗಂಗಾಧರ ಲೋಕನ್ನವರ, ವಿನುತಾ ಚನ್ನಬಸವ ನಾವಲಗಿ, ಮಂಗಲಾದೇವಿ ಈ. ಬೆಟಗೇರಿ, ಕಜಾಪ ಕಾರ್ಯದರ್ಶಿ ಈಶ್ವರಚಂದ್ರ ಬೆಟಗೇರಿ, ಕಾರ್ಯಕ್ರಮ ಸಂಯೋಜಕ ಪ್ರಕಾಶ ಕೋಟಿನತೋಟ ಇದ್ದರು.