ಪಡಿತರ ಚೀಟಿ, ಆಧಾರ್ ಮೊದಲಾದ ದಾಖಲೆಗಳ ಸಮೇತ ಬಂದಿದ್ದ ಅವರು, ಬೆಳಿಗ್ಗೆಯಿಂದಲೇ ಉದ್ದನೆಯ ಸರದಿ ಸಾಲಿನಲ್ಲಿ ನಿಂತಿದ್ದರು. ಬಹುತೇಕರು ಮಹಿಳೆಯರೇ ಇದ್ದರು. ಸಾಲು ಕಾಡಾ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಇತ್ತು. ಮಹಿಳೆಯರು ಪ್ರಾದೇಶಿಕ ಆಯುಕ್ತರ ಕಚೇರಿ, ನ್ಯಾಯಾಲಯ ಆವರಣ, ರಾಣಿ ಚನ್ನಮ್ಮ ವೃತ್ತ ಸುತ್ತಮುತ್ತ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಗುಂಪು ಗುಂಪಾಗಿ ನಿಂತಿದ್ದರು. ಆಗಾಗ ಕಾಡಾ ಕಚೇರಿ ಆವರಣಕ್ಕೆ ಬಂದು ಜಮಾಯಿಸುತ್ತಿದ್ದರು. ಅವರನ್ನು ಅಲ್ಲಿಂದ ಕಳುಹಿಸಲು ಪೊಲೀಸರು ಹರಸಾಹಸಪಟ್ಟರು. ಪದೇ ಪದೇ ಬರುತ್ತಿದ್ದ ಅವರ ಮೇಲೆ ಆಗಾಗ ಲಾಠಿ ಬೀಸಿದರು.