ಬೆಳಗಾವಿ: ‘ಬೆಳಗಾವಿ ಕ್ಷೇತ್ರದಲ್ಲಿ ಎರಡು ದಿನಗಳಿಂದ ಕಾಂಗ್ರೆಸ್ನವರು ಹಣ ಹಂಚುವುದು ಬಿಟ್ಟರೆ, ಮತದಾರರ ಮನವೊಲಿಕೆ ಕೆಲಸ ಮಾಡಿಲ್ಲ. ಹಣ ಹಂಚಿಕೆ ಮೇಲೆಯೇ ಅವರು ಗೆಲ್ಲುವ ಭ್ರಮೆಯಲ್ಲಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಮತದಾನದ ಬಳಿಕ ಮಾತನಾಡಿದ ಅವರು, ‘ಹಣ ಮತ್ತು ಅಧಿಕಾರದ ಬಲದ ಮೇಲೆ ಪ್ರಜಾತಂತ್ರ ವ್ಯವಸ್ಥೆ ನಡೆಯುವುದಿಲ್ಲ’ ಎಂದರು.‘
ಇದಕ್ಕೆ ಪ್ರತ್ಯುತ್ತರ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ‘ಹಣದ ವಿಷಯ ನಮಗೆ ಗೊತ್ತಿಲ್ಲ. ಜೂನ್ 4ರಂದು ಜನರೇ ಈ ಆರೋಪಕ್ಕೆ ಉತ್ತರಿಸುವರು. ಅಲ್ಲಿಯವರೆಗೂ ಕಾಯಬೇಕು’ ಎಂದರು.
ಪ್ರತಿ ಸಲದಂತೆ ಅವರು ಮತದಾನಕ್ಕಾಗಿ ಕೇಸರಿ ಬಣ್ಣದ ಸೀರೆ ಉಟ್ಟು ಬಂದರು. ಕೊರಳಲ್ಲಿ ರುದ್ರಾಕ್ಷಿ ಹಾರ ಧರಿಸಿ, ಕೈಯಲ್ಲಿ ನೊಣವಿನಕೆರೆಯ ಕಾಡಸಿದ್ಧೇಶ್ವರ ಅಜ್ಜನ ಭಾವಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡೇ ಮತದಾನ ಮಾಡಿದರು.