ಬೆಳಗಾವಿ: ಜಿಲ್ಲೆಯ ಎರಡೂ ಕ್ಷೇತ್ರಗಳ ಲೋಕಸಭಾ ಚುನಾವಣೆಗೆ ಮಂಗಳವಾರ ‘ಮಂಗಳ ಹಾಡುವ’ ಸಮಯ. ಲೋಕತಂತ್ರ ವ್ಯವಸ್ಥೆಯ ಈ ‘ಸುಂದರಕಾಂಡ’ ಇಲ್ಲಿಗೆ ಕೊನೆಯ ಹಂತ ತಲುಪಿದೆ. ಎಲ್ಲ ಅಭ್ಯರ್ಥಿಗಳೂ ಪರೀಕ್ಷೆ ಬರೆದಾಗಿದೆ. ಉಳಿದಿದ್ದು ನಿರೀಕ್ಷೆ ಮಾತ್ರ.
ಬೆಳಗಾವಿ ಹಾಗೂ ಚಿಕ್ಕೋಡಿ; ಎರಡೂ ಕ್ಷೇತ್ರಗಳು ರಾಜಕೀಯ ‘ಪಲ್ಲಟ’ ಎದುರಿಸಿದ್ದನ್ನು ದೇಶವೇ ನೋಡುವಂತಾಗಿದೆ. ಈ ಬಾರಿಯ ಲೋಕಸಮರ ಹೊಸ ಮನ್ವಂತರಕ್ಕೆ ನಾಂದಿ ಹಾಡುವುದಂತೂ ಖಚಿತವಾಗಿದೆ. ಯಾರೇ ಗೆದ್ದರೂ ‘ಅಚ್ಚರಿ’ ಫಲಿತಾಂಶ ಎನ್ನದೇ ವಿಧಿಯಿಲ್ಲ.
ಒಂದೂವರೆ ತಿಂಗಳಿಂದ ಬಿಸಿಲಿಗಿಂತ ಹೆಚ್ಚು ಕಾವೇರಿದ್ದು ಚುನಾವಣಾ ಸುದ್ದಿಗಳು. ನೀರಿಗಿಂತ ಹೆಚ್ಚು ದಾಹ ಉಂಟುಮಾಡಿದ್ದು ನಾಯಕರ ಭರವಸೆಗಳು. ಬರದ ಬವಣೆಯನ್ನು ತುಸು ಮರೆಯುವಂತೆ ಮಾಡಿದ್ದು ಅಬ್ಬರದ ಪ್ರಚಾರಗಳು.
ನೀರು– ಆಹಾರ– ಮೇವು; ಮೂರೂ ಕೊರತೆಗಳ ನಡುವೆಯೂ ಜನ ಹುಮ್ಮಸ್ಸಿನಿಂದ ಭಾಗಿಯಾಗಿದ್ದು ನಮ್ಮ ಲೋಕತಂತ್ರ ವ್ಯವಸ್ಥೆಯ ಸೆಳೆತಕ್ಕೆ ಸಾಕ್ಷಿ. ಬಿಸಿಲಿನ ಝಳ ಲೆಕ್ಕಿಸದೇ ಚುನಾವಣೆಯಲ್ಲಿ ಭಾಗಿಯಾದ ಮತದಾರ ಪ್ರಭುಗಳು ತಮ್ಮ ಜವಾಬ್ದಾರಿ ಮೆರೆದರು.
ಅಭ್ಯರ್ಥಿಗಳಂತೂ ಟಿಕೆಟ್ ಗಿಟ್ಟಿಸುವುದರಿಂದ ಹಿಡಿದು, ಮತದಾನ ಪ್ರಕ್ರಿಯೆ ನಡೆಯುವವರೆಗೂ ಮಾಡಿದ ಕಸರತ್ತುಗಳು, ಸರ್ಕಸ್ಸುಗಳು, ದೊಡ್ಡಾಟಗಳು, ಮೇಲಾಟಗಳು ಲೆಕ್ಕಕ್ಕಿಲ್ಲ.
ವಾದ– ವಾಗ್ವಾದ, ತಂತ್ರ– ಪ್ರತಿತಂತ್ರ, ಗಾಳ– ಪ್ರತಿಗಾಳ, ಆರೋಪ– ಪ್ರತ್ಯಾರೋಪ... ಹಗಲು ರಾತ್ರಿ ಪ್ರತಿಧ್ವನಿಸಿದವು.
‘ದಾನ’ ಕೇಳಲು ಬಂದವರು: ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ರಾಷ್ಟ್ರಮಟ್ಟದ ಹಲವು ನಾಯಕರ ದಂಡೇ ಜಿಲ್ಲೆಗೆ ಬಂತು. ಕಡುವೈರಿ ಕಾಂಗ್ರೆಸ್ಸಿಗರ ಮೇಲೆ ಇನ್ನಿಲ್ಲದಂತೆ ದಾಳಿ ಮಾಡಿತು. ಸಾಲದ್ದಕ್ಕೆ ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳನ್ನೂ ಕರೆಸಿ ಯುದ್ಧಸೇನಾನಿಗಳಂತೆ ಬಳಸಿಕೊಂಡರು.
ಕಾಂಗ್ರೆಸ್ನಲ್ಲಿ ಮಾತ್ರ ಯಾವೊಬ್ಬ ರಾಷ್ಟ್ರೀಯ ನಾಯಕ ಕೂಡ ಜಿಲ್ಲೆಗೆ ಕಾಲಿಡಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ, ಸ್ಥಳೀಯ ನಾಯಕರಿಗೆ ದೊಡ್ಡ ವರ್ಚಸ್ಸು ಇದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡರು ಎಂಬುದು ಪಕ್ಷದ ಮುಖಂಡರ ಮಾತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾವೇ ಅಭ್ಯರ್ಥಿಗಳು ಎಂಬಷ್ಟರ ಮಟ್ಟಿಗೆ ಆಸಕ್ತಿ ತೋರಿದರು. ಬಿಜೆಪಿಯ ನಾಯಕರು ಬಿಟ್ಟ ಎಲ್ಲ ಬಾಣಗಳಿಗೂ ಕ್ಷಣಮಾತ್ರದಲ್ಲಿ ತಿರುಗುಬಾಣ ಹೂಡಿದರು.
‘ಈ ಚುನಾವಣೆ ನಿಮ್ಮ ಮಾಂಗಲ್ಯ ಉಳಿಸಿಕೊಳ್ಳುವ ಚುನಾವಣೆ’ ಎಂದು ಪ್ರಧಾನಿ ಮೋದಿ ಗುಡುಗಿದರೆ; ‘ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ’ ಎಂದು ಸಿದ್ದರಾಮಯ್ಯ ಅಬ್ಬರಿಸಿದರು.
ಇತ್ತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕೂಡ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಹೀಗಾಗಿ, ಚಿಕ್ಕೋಡಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿಯನ್ನು ಹೆಬ್ಬಾಳಕರ, ಬೆಳಗಾವಿ ಅಭ್ಯರ್ಥಿ ಗೆಲ್ಲಿಸುವ ಹೊಣೆಯನ್ನು ಜಾರಕಿಹೊಳಿ ಪರಸ್ಪರ ವಿನಿಮಯ ಮಾಡಿಕೊಂಡರು.
‘ಯಾರು ಎಷ್ಟೇ ಹಾರಾಡಿದರೂ ಸೂತ್ರಧಾನ ನಾನೇ’ ಎಂದು ಮತದಾರ ಸುಮ್ಮನಿದ್ದು, ಪ್ರಜ್ಞಾವಂತಿಕೆ ಮೆರೆದ. ಗಣತಂತ್ರ ಹಬ್ಬದಲ್ಲಿ ಮಂಗಳವಾರ (ಮೇ 7) ಜಾತ್ರೆ. ಈ ರಥದಲ್ಲಿ ಯಾರನ್ನು ಮೆರೆಸುತ್ತಾನೆ– ಯಾರನ್ನು ಮರೆಸುತ್ತಾನೆ ಎಂಬುದನ್ನು ಮತದಾರ ಬಿಟ್ಟುಕೊಟ್ಟಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.