ಬೆಳಗಾವಿ: ಗಡಿಯಲ್ಲಿ ಭಾಷಾ ವಿವಾದ ಹುಟ್ಟುಹಾಕಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಆರೋಪದಡಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ಶುಭಂ ಶೆಳಕೆ ಅವರನ್ನು ಇಲ್ಲಿನ ಮಾಳಮಾರುತಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ರೌಡಿಶೀಟರ್ ಆಗಿರುವ ಶುಭಂ ಶೆಳಕೆ ವಿರುದ್ಧ ನಮ್ಮ ಠಾಣೆಯಲ್ಲಿ ನಾಲ್ಕೈದು ಪ್ರಕರಣಗಳಿವೆ. ಲೋಕಸಭೆ ಚುನಾವಣೆಯ ಈ ಹೊತ್ತಿನಲ್ಲಿ ಸೂಕ್ಷ್ಮ ಪ್ರದೇಶವಾದ ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಬಂಧಿಸಿದ್ದೇವೆ’ ಎಂದು ಮಾಳಮಾರುತಿ ಠಾಣೆ ಇನ್ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಳಗಾವಿಯ ಆನಂದವಾಡಿಯಲ್ಲಿ ಮಾರ್ಚ್ 6ರಂದು ಅಂತರರಾಷ್ಟ್ರೀಯ ಜಂಗಿ ನಿಕಾಲಿ ಕುಸ್ತಿ ಪಂದ್ಯ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ನೇಪಾಳದ ಕುಸ್ತಿಪಟುವೊಬ್ಬರು ‘ಜೈ ಮಹಾರಾಷ್ಟ್ರ’ ಎಂಬ ಘೋಷಣೆ ಕೂಗಿದ್ದರು. ಅದನ್ನು ಉದ್ಯಮಿ ಶ್ರೀಕಾಂತ ದೇಸಾಯಿ ವಿರೋಧಿಸಿದ್ದರು. ಮಹಾರಾಷ್ಟ್ರದ ಶಿನೋಳಿಯಲ್ಲಿ ಇವರ ಉದ್ಯಮವಿದೆ. ಅಲ್ಲಿ ದೇಸಾಯಿ ಅವರ ಭಾವಚಿತ್ರವಿರುವ ಜಾಹೀರಾತು ಫಲಕಕ್ಕೆ ಎಂಇಎಸ್ ಮುಖಂಡರು ಮಸಿ ಬಳಿದಿದ್ದರು. ಉದ್ಯಮದ ಕಚೇರಿ ಮೇಲೆ ಜೈ ಮಹಾರಾಷ್ಟ್ರ ಎಂಬ ಫಲಕ ಹಾಕಬೇಕು. ಇಲ್ಲವೆ ಕರ್ನಾಟಕಕ್ಕೆ ಹೋಗಬೇಕು ಎಂದು ಬೆದರಿಕೆ ಹಾಕಿದ್ದರು.
ಆರೋಪಿ ಶೆಳಕೆ ಈ ಎಲ್ಲ ಘಟನೆಗಳ ನೇತೃತ್ವ ವಹಿಸಿದ್ದರು.