ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಕೆ.ಹುಬ್ಬಳ್ಳಿ: ಮಲಪ್ರಭೆ ಒಡಲಿಗೆ ವಿಷಪ್ರಾಶನ..!

ಎಸ್.ಬಿ.ವಿಭೂತಿಮಠ
Published 18 ಡಿಸೆಂಬರ್ 2023, 7:46 IST
Last Updated 18 ಡಿಸೆಂಬರ್ 2023, 7:46 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಅನೇಕ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನ– ಜಾನುವಾರುಗಳ ಜೀವನಾಡಿ ಮಲಪ್ರಭೆ. ಪಶ್ಚಿಮಘಟ್ಟ ಅರಣ್ಯದ ಅಸಂಖ್ಯಾತ ಜೀವಸಂಕುಲಗಳ ತೊಟ್ಟಿಲು ಈ ನದಿ. ಆದರೆ, ನಾಗರಿಕರ ‘ಅನಾಗರಿಕ’ ನಡೆಯ ಕಾರಣ ಇಂದು ತಾಯೊಡಲಿಗೆ ಆತಂಕ ಎದುರಾಗಿದೆ. ಅಮೃತ ನೀಡಿದ ನದಿಗೆ ಮನುಷ್ಯರು ವಿಷಪ್ರಾಶನ ಮಾಡುತ್ತಿದ್ದಾರೆ.

ಖಾನಾಪೂರ ತಾಲ್ಲೂಕಿನ ಕಣಕುಂಬಿಯಲ್ಲಿ ತೊರೆಯಾಗಿ ಹುಟ್ಟಿ ಪೂರ್ವಾಭಿಮುಖವಾಗಿ ಅಚ್ಚಹಸಿರಿನ ಅರಣ್ಯದೊಳಗೆ ಶಾಂತಳಾಗಿ ಹರಿದು ಬರುವ ಮಲಪ್ರಭೆ, ಜೀವ ಸಂಕುಲದ ದಾಹ ನೀಗಿಸುವ ಜೊತೆಗೆ ಕೃಷಿ ಭೂಮಿಗಳಿಗೆ ನೀರಿನ ಆಸರೆಯಾಗಿದ್ದಾಳೆ.

ಈ ನದಿಯು, ಜಾಂಬೋಟಿ, ಖಾನಾಪುರ, ಪಾರಿಶ್ವಾಡ ಮಾರ್ಗವಾಗಿ ಖಾನಾಪುರ ತಾಲ್ಲೂಕಿನಲ್ಲಿ ಸುಮಾರು 68 ಕಿ.ಮೀ ಕ್ರಮಿಸಿ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿ ಪ್ರವೇಶಿಸುತ್ತದೆ.

ಉಗಮ ಸ್ಥಾನದಿಂದ ಖಾನಾಪುರ ಪಟ್ಟಣದ ವರೆಗೆ ಸುಮಾರು 40 ಕಿ.ಮೀ ದೂರ ಕ್ರಮೀಸುವ ಈ ನದಿ, ಬಹುಪಾಲು ಅರಣ್ಯ ಪ್ರದೇಶದಲ್ಲೇ ಸಾಗುತ್ತದೆ. ಹೀಗಾಗಿ ನದಿ ನೀರು ಔಷಧೀಯ ಗುಣಗಳು ಹಾಗೂ ಖನಿಜಾಂಶಗಳನ್ನು ಒಳಗೊಂಡಿರುತ್ತದೆ. 

ಅರಣ್ಯದಲ್ಲಿ ಹರಿಯುವವರೆಗೂ ಮಲಪ್ರಭೆಗೆ ಯಾವುದೇ ಆತಂಕ ಇಲ್ಲ. ಆದರೆ, ಖಾನಾಪುರ ಪಟ್ಟಣದಿಂದ ಎಂ.ಕೆ.ಹುಬ್ಬಳ್ಳಿ ಪಟ್ಟಣದವರೆಗೆ ಅರಣ್ಯೇತರ ಪ್ರದೇಶದಲ್ಲಿ ನದಿ ಸಾಗುವ ಕಾರಣ, ಇಲ್ಲಿ ಮಾನವ ತ್ಯಾಜ್ಯ, ಪ್ಲಾಸ್ಟಿಕ್, ಚರಂಡಿ ನೀರು, ಸತ್ತ ಪ್ರಾಣಿಗಳ ಕಳೆಬರ, ಕಾರ್ಖಾನೆಗಳ ತ್ಯಾಜ್ಯ ನೀರು ಸೇರಿದಂತೆ ಹಾನಿಕಾರಕ ಪದಾರ್ಥಗಳು ನದಿಯಲ್ಲಿ ಮಿಶ್ರಣಗೊಳ್ಳುತ್ತಿವೆ. ಪರಿಣಾಮ ನದಿ ನೀರು ಕುಡಿಯಲು ಯೋಗ್ಯವಲ್ಲದ ಮಟ್ಟಿಗೆ ಮಲಿನಗೊಳ್ಳುತ್ತಿದೆ. ಹೀಗಾಗಿ ನದಿಯಲ್ಲಿರುವ ಮೀನು ಮತ್ತಿತರ ಜಲಚರಗಳು ಉಸಿರುಗಟ್ಟಿ ಸಾಯುವುದು ಸಾಮಾನ್ಯವಾಗಿದೆ.

ಮಲಿನ ನೀರನ್ನೇ ಕುಡಿಯುವ ಅನಿವಾರ್ಯ: ಮಲಪ್ರಭೆ ಖಾನಪುರಿಂದ ಬಂದು ಕಿತ್ತೂರು ಹಾಗೂ ಬೈಲಹೊಂಗಲ ತಾಲ್ಲೂಕಿನಲ್ಲಿ ಸಾಗಿ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಆಣೆಕಟ್ಟಿಗೆ ಹೋಗಿ ಸೇರುತ್ತದೆ. ಅಲ್ಲಿಂದ ಮತ್ತೆ ನೂರಾರು ಕಿ.ಮೀ ಹರಿದು ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ. 

ಕಲ್ಮಷಗೊಳ್ಳುತ್ತಿರುವ ನದಿಯ ನೀರನ್ನೇ ಬೈಲಹೊಂಗಲ, ಸವದತ್ತಿ ಸೇರಿದಂತೆ ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳ ಜನತೆ ಕುಡಿಯಲು ಬಳಸುತ್ತಿದ್ದಾರೆ.

ಎಂ.ಕೆ.ಹುಬ್ಬಳ್ಳಿ ಪಟ್ಟಣದ ಬಳಿ ಹರಿಯುವ ಮಲಪ್ರಭಾ ನದಿಗೆ ಪಟ್ಟಣದ ಕೊಳಚೆ ನೀರು ಸೇರ್ಪಡೆ ಒಂದೆಡೆಯಾದರೆ, ನದಿ ತೀರದ ಶರಣೆ ಗಂಗಾಂಬಿಕಾ ಐಕ್ಯಮಂಟಪ, ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ನದಿ ದಡದಲ್ಲಿ ಸಂಗ್ರಹಗೊಳ್ಳುತ್ತಿರುವ ತ್ಯಾಜ್ಯ ವಸ್ತುಗಳು ಇಲ್ಲಿಗೆ ಬಂದ ಜನರಿಗೆ ವಾಕರಿಕೆ ತರಿಸುತ್ತಿವೆ.

ಪೂಜೆ ಮತ್ತು ಅಂತಿಮ ವಿಧಿವಿಧಾನದ ಹೆಸರಲ್ಲಿ ನದಿ ಒಡಲಿಗೆ ಎಸೆಯುವ ಬಟ್ಟೆ, ವಸ್ತ್ರ, ಮಡಿಕೆ, ಮಾನವನ ಸುಟ್ಟ ಬೂದಿ ಮಿಶ್ರಿತ ಎಲುಬಿನ ತುಕಡಿಗಳು, ದೇವರ ಹಳೆಯ ಫೋಟೊಗಳು ನದಿ ದಡದಲ್ಲಿ ಎಲ್ಲೆಂದರಲ್ಲಿ ಬಿದ್ದಿವೆ. ಪ್ರೇಕ್ಷಣೀಯ ಸ್ಥಳವಾಗಿರುವ ಇಲ್ಲಿ ಬರುವ ಪ್ರವಾಸಿಗಳ ಬೇಸರಕ್ಕೂ ಇದು ಕಾರಣವಾಗಿದೆ.

ನಿರ್ಲಕ್ಷ್ಯ ಮತ್ತು ಅಸ್ವಚ್ಛತೆ ಕಂಡು ಜನರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ನದಿ ದಡದ ಎಲ್ಲ ಊರಿನ ಬಳಿಯಲ್ಲೂ ಇದೇ ಪರಿಸ್ಥಿತಿ ಇರುವುದರಿಂದ ನದಿ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ.

ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ದಡದಲ್ಲಿ ಎಸೆದ ತ್ಯಾಜ್ಯ
ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿ ದಡದಲ್ಲಿ ಎಸೆದ ತ್ಯಾಜ್ಯ
ಸ್ವಚ್ಛತೆಗೆ ಶ್ರಮಿಸುವ ಸಂತ
ಮಲಿನಗೊಂಡ ಮಲಪ್ರಭೆಯ ಅಳಲು ನೋಡಲಾಗದ ಮಧ್ವಾಚಾರ್ಯ ಬೆಳಗಾಂವರ್ ನದಿ ದಡದ ಸ್ವಚ್ಛತೆಗೆ ಶ್ರಮಿಸಿದ್ದಾರೆ. ‘ನದಿಯ ಸ್ವಚ್ಛತೆಗೆ ಶ್ರಮಿಸುವ ಸಂತ’ ಎಂದೇ ಅವರು ಹೆಸರುವಾಸಿ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ಮಲಪ್ರಭಾ ನದಿಯಲ್ಲಿ ಭಕ್ತರು ಹಾಕಿದ ವಿವಿಧ ತ್ಯಾಜ್ಯ ತೆಗೆದು ನದಿ ಸ್ವಚ್ಛತೆ ಕಾಪಾಡಿದ್ದಾರೆ. ಧಾರ್ಮಿಕ ಸಭೆ ಸಮಾರಂಭ ಯಾತ್ರೆಗಳಲ್ಲಿ ಭಕ್ತಿಯ ಭಜನೆ ಮಾಡುವ ಇವರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಆದರೆ ಜನರು ಬದಲಾಗದ್ದರಿಂದ ಈಗ ಮಲಪ್ರಭೆಯ ಮಡಿಲು ಮತ್ತೆ ಮಲಿನಗೊಂಡಿದೆ.
ಸಂಸ್ಕರಣಾ ಘಟಕ ವಿಳಂಬ
ಮಲಪ್ರಭಾ ನದಿಗೆ ಸೇರುತ್ತಿರುವ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಕೊಳಚೆ ನೀರು ತಡೆಗೆ ಕರ್ನಾಟಕ ನಗರ ನೀರು ಮತ್ತು ಒಳಚರಂಡಿ (ಕೆಯುಡಬ್ಲ್ಯೂಎಸ್) ದಡಿ ಕೊಳಚೆ ನೀರು ಸಂಸ್ಕರಣಾ ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ. ಪಟ್ಟಣದ ಎರಡು ಕಡೆಗಳಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು ಕೊಳಚೆ ನೀರು ಶುದ್ಧೀಕರಿಸಿ ನದಿಗೆ ಹರಿಬಿಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಆದರೆ ಕಾಮಗಾರಿ ನಿಧಾನಗತಿಯಿಂದ ಸಾಗಿದ್ದು ಯೋಜನೆ ಅನುಷ್ಠಾನ ವಿಳಂಬಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT