ಬೆಳಗಾವಿ: ಕರ್ನಾಟಕ ಸರ್ಕಾರ ಅಂಗೀಕರಿಸಿದ ‘ಕನ್ನಡ ಭಾಷಾ ಸಮಗ್ರ ವಿಧೇಯಕ’ವನ್ನು ಗಡಿ ಭಾಗದಲ್ಲಿ ಅನುಷ್ಠಾನ ಮಾಡದಂತೆ ಮಹಾರಾಷ್ಟ್ರ ಸರ್ಕಾರ ಒತ್ತಡ ಹೇರಬೇಕು ಎಂದು ಕೋರಿ ಇಲ್ಲಿನ ಎಂಇಎಸ್ ಮುಖಂಡರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.
‘ಬೆಳಗಾವಿಯೂ ಸೇರಿದಂತೆ 865 ಹಳ್ಳಿಗಳು ವಿವಾದಕ್ಕೆ ಒಳಪಟ್ಟಿವೆ. ಗಡಿ ವಿವಾದ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ. ಇಂಥ ವಿವಾದಿತ ಪ್ರದೇಶದಲ್ಲಿ ಭಾಷಾ ವಿಧೇಯಕ ಜಾರಿ ಮಾಡುವುದು ಸರಿಯಲ್ಲ. ಕರ್ನಾಟಕ ಸರ್ಕಾರ ಗಡಿ ಭಾಗದ ಮರಾಠಿಗರನ್ನು ಉದ್ದೇಶಪೂರ್ವಕ ತುಳಿಯುತ್ತಿದೆ’ ಎಂದೂ ಪತ್ರದಲ್ಲಿ ದೂರಿದ್ದಾರೆ.
‘ಬೆಳಗಾವಿಯಲ್ಲಿ ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಯ ನಾಮಫಲಕಗಳು ಮೊದಲಿನಿಂದಲೂ ಇವೆ. ಈಗ ಶೇ 60ರಷ್ಟು ಕನ್ನಡ ಫಲಕ ಬಳಸಬೇಕು ಎಂಬ ಒತ್ತಡ ಹೇರುವ ಮೂಲಕ ಗಡಿ ಹೋರಾಟಗಾರರನ್ನು ಪ್ರಚೋಚನೆ ಮಾಡಲಾಗುತ್ತಿದೆ. ಇದನ್ನು ಈಗಲೇ ತಡೆಯಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದೂ ಆಗ್ರಹಿಸಿದ್ದಾರೆ.
‘ಕರ್ನಾಟಕ ಸರ್ಕಾರ ಇಲ್ಲಿನ ಕನ್ನಡ ಸಂಘಟನೆಗಳನ್ನು ಎತ್ತಿಕಟ್ಟುತ್ತಿದೆ. ಮಹಾರಾಷ್ಟ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಗಡಿ ಹೋರಾಟದಲ್ಲಿ ನಮ್ಮ ಬೆನ್ನಿಗೆ ನಿಲ್ಲಬೇಕು’ ಎಂದೂ ಕೋರಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರಾದ ದೀಪಕ್ ದಳವಿ, ಮನೋಹರ ಕಿಣೇಕರ, ಮಾಲೋಜಿ ಅಷ್ಟೇಕರ, ಪ್ರಕಾಶ ಬಿಳಗೋಜಿ ಇತರರು ಪತ್ರಕ್ಕೆ ಸಹಿ ಮಾಡಿದ್ದಾರೆ.