ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಗಾಳಿ ಅಥವಾ ಅಲೆ ನಡೆಯುವುದಿಲ್ಲ. ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ, ಕಾಂಗ್ರೆಸ್ಗೆ ಬಹಳ ಅನುಕೂಲವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗಾರಗೊಂದಿಗೆ ಮಾತನಾಡಿದ ಅವರು, ‘ಕಾಶ್ಮೀರ ವಿಷಯ ಇಟ್ಟುಕೊಂಡು ಚುನಾವಣೆ ಮಾಡಲು ಹೊರಟಿದ್ದಾರೆ. ಆದರೆ, ಜನ ಸೌಲಭ್ಯಗಳನ್ನು ಕೇಳುತ್ತಾರೆ. ಈ ನಿಟ್ಟಿನಲ್ಲಿ ಕೇಂದ್ರ ಏನೂ ಕೊಡುಗೆ ನೀಡಿಲ್ಲ’ ಟೀಕಿಸಿದರು.
‘ಮೂರು ಬಾರಿ ಆಯ್ಕೆಯಾಗಿರುವ ಬೆಳಗಾವಿ ಕ್ಷೇತ್ರಕ್ಕೆ ಸಂಸದ ಸುರೇಶ ಅಂಗಡಿ ಕೊಡುಗೆ ಶೂನ್ಯ. ಸೌಜನ್ಯಕ್ಕಾದರೂ ಅವರು ಕ್ಷೇತ್ರದಲ್ಲಿ ಓಡಾಡಬೇಕಿತ್ತು. ಎರಡು ತಿಂಗಳಿಂದೀಚೆಗೆ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಆದರೆ, ಚಿಕ್ಕೋಡಿಯ ಪ್ರಕಾಶ ಹುಕ್ಕೇರಿ ಮಾದರಿಯಾಗಿದ್ದಾರೆ’ ಎಂದು ತಿಳಿಸಿದರು.
‘ಮೋದಿ ನೋಡಿ ಮತ ಹಾಕುವವರಿದ್ದಾರೆ. ಬಿಜೆಪಿ ನೋಡಿ ಮತ ನೀಡುವವರೂ ಇದ್ದಾರೆ. ಆದರೆ, ಅದರಿಂದಲೇ ಗೆಲ್ಲುವುದಕ್ಕೆ ಆಗುವುದಿಲ್ಲ. ಅವರನ್ನು ಒಮ್ಮೆ ನೋಡಿಯಾಗಿದೆ; ಮತ್ತೆ ನೋಡಲು ಜನ ಸಿದ್ಧವಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.