ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ): ಶರಣರ ತತ್ವಾದರ್ಶಗಳ ಬಗ್ಗೆ ಪ್ರಖರವಾಗಿ ಮಾತನಾಡುವ, ಪ್ರಗತಿಪರ ವಿಚಾರಧಾರೆಯುಳ್ಳ ತಾಲ್ಲೂಕಿನ ಬೈಲೂರಿನ ನಿಷ್ಕಲ ಮಂಟಪದ ಮುಖ್ಯಸ್ಥ ನಿಜಗುಣಾನಂದ ಸ್ವಾಮೀಜಿ ಅವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಅರಸಿ ಬಂದಿದೆ.
ಗದಗ ಜಿಲ್ಲೆಯ ಮುಂಡರಗಿಯ ತೋಂಟದಾರ್ಯ ಶಾಖಾಮಠದ ಪೀಠಾಧಿಪತಿಯೂ ಆಗಿರುವ ಅವರು, ‘ದುಶ್ಚಟಗಳನ್ನೆಲ್ಲ ನನ್ನ ಜೋಳಿಗೆಗೆ ಹಾಕಿ’ ಎಂದು ಪಾದಯಾತ್ರೆ ಮಾಡಿ ಗಮನಸೆಳೆದಿದ್ದಾರೆ. ಮೌಢ್ಯ ಆಚರಣೆಗಳ ವಿರುದ್ಧ ಆಂದೋಲನ ಕೈಗೊಂಡಿದ್ದಾರೆ. ನಾಡಿನ ತುಂಬೆಲ್ಲ ಅಪಾರ ಭಕ್ತವಲಯ ಹೊಂದಿದ್ದಾರೆ. ಅವರ ಪ್ರವಚನ ಆಲಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಶ್ರೀಗಳ ಪ್ರಗತಿಪರ ವಿಚಾರಧಾರೆಗಳನ್ನು ಪಟ್ಟಭದ್ರ ಶಕ್ತಿಗಳು, ಜೀವ ಬೆದರಿಕೆ ಹಾಕಿದ ಪ್ರಸಂಗಗಳೂ ನಡೆದಿವೆ.
‘ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮ ಮಹೋತ್ಸವ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದರಿಂದ ತುಂಬಾ ಸಂತಸವಾಗಿದೆ. ನಾಡಿನಲ್ಲಿ ಮಾಡಿರುವ ಅಳಿಲುಸೇವೆಗೆ ಸಿಕ್ಕ ಪುರಸ್ಕಾರವನ್ನು ನಾಡಿನ ಜನತೆಗೆ ಸಮರ್ಪಿಸುತ್ತೇನೆ’ ಎಂದು ಶ್ರೀಗಳು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕರ್ನಾಟಕ ಎಂದರೆ ಸಂಕ್ಷಿಪ್ತ ಭಾರತ ಇದ್ದಂತೆ. ನಾಡು, ನುಡಿ, ಜಲ, ಭಾಷೆ ಉಳಿವಿಗಾಗಿ ಹೋರಾಟ ಮಾಡುವುದು ಎಲ್ಲರ ಪರಮ ಕರ್ತವ್ಯ. ಈ ಕರುನಾಡಿಗೆ ಬಸವಾದಿ ಶರಣರ ವಚನ ಸಾಹಿತ್ಯ ಮುಕುಟಮಣಿ ಇದ್ದಂತೆ. ಶರಣರು ಸಾರಿದ ಸಮಾನತೆ ಬಗ್ಗೆ ಜಾಗೃತಿ ಮೂಡಿಸುವ ನನ್ನ ಪ್ರಯತ್ನ ನಿರಂತರವಾಗಿರುತ್ತದೆ’ ಎಂದೂ ನುಡಿದರು.