‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ’ ಧ್ವಜಾರೋಹಣ
ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯವರು ಶುಕ್ರವಾರ ಬೆಳಿಗ್ಗೆ ಪ್ರತ್ಯೇಕ ಧ್ವಜಾರೋಹಣ ನೆರವೇರಿಸಿದರು.
ಆ ಗ್ರಾಮದ ಬೈಲಹೊಂಗಲ ಬಸ್ ನಿಲ್ದಾಣ ಸಮೀಪದ ಭಡಕಲ್ ಬಿದಿಯ ಮುಖ್ಯ ರಸ್ತೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಡಿವೇಶ ಇಟಗಿ ಹಾಗೂ ಕಾರ್ಯದರ್ಶಿ ಶ್ರೀಕಾಂತ ಮಾಧುಭರಮಣ್ಣವರ ನೇತೃತ್ವದಲ್ಲಿ ರಾಷ್ಟ್ರಗೀತೆಯೊಂದಿಗೆ ಧ್ವಜಾರೋಹಣ ನೆರವೇರಿಸಲಾಯಿತು.
ತಕ್ಷಣ ಬಂದ ಪೊಲೀಸರು, ಆ ಧ್ವಜ ತೆರವುಗೊಳಿಸಿ ಹೋರಾಟಗಾರರನ್ನು ತಮ್ಮ ವಶಕ್ಕೆ ಪಡೆದರು.
ಈ ವೇಳೆ ಮಾತನಾಡಿದ ಅಡಿವೇಶ ಇಟಗಿ, ‘ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಹೀಗಾಗಿ, ಪ್ರತ್ಯೇಕ ರಾಜ್ಯ ಆಗುವವರೆಗೂ ನಮ್ಮ ಹೋರಾಟ ನಿಲ್ಲದು. ಈ ಧ್ವಜಾರೋಹಣ 3ನೇ ಬಾರಿಗೆ ಮಾಡುತ್ತದ್ದೇವೆ. ನಾವು ಕನ್ನಡ ವಿರೋಧಿಗಳಲ್ಲ. ಆದರೆ, ನಮಗೆ ಅಭಿವೃದ್ಧಿ ಬೇಕಿದೆ. ಆದರೆ, ಸರ್ಕಾರ ಒಬ್ಬರಿಗೆ ಬೆಣ್ಣೆ; ಮತ್ತೊಬ್ಬರಿಗೆ ಸುಣ್ಣ ಹಂಚುತ್ತಾ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಶ್ರೀಕಾಂತ ಮಾಧುಭರಮಣ್ಣವರ ಮಾತನಾಡಿ, ‘ಸುವರ್ಣ ವಿಧಾನಸೌಧ ಸಂಪೂರ್ಣ ನಿರುಪಯುಕ್ತವಾಗಿದೆ’ ಎಂದರು.
ಆನಂದಗೌಡ ಪಾಟೀಲ, ಬಸವರಾಜ ಧೂಳಪ್ಪನವರ, ಗಂಗಾಧರ ಅಗಸಿಮನಿ, ಸಮರ್ಥ ಇಟಗಿ, ವಿರೂಪಾಕ್ಷ ರೊಟ್ಟಿ, ಚಂಬಣ್ಣ ವಾಲಿ, ಸಂತೋಷ ಕಾಗತಿ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.