ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ರಸ್ತೆ ದಾಟುತ್ತಿದ್ದ ವೃದ್ಧೆಯೊಬ್ಬರು ಕೆಎಸ್ಆರ್ಟಿಸಿ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಾಹೂ ನಗರದ ನಿವಾಸಿ ಶಾಲನ್ ದೇಸಾಯಿ (73) ಮೃತರು. ಕೇದನೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಅಂಬೇಡ್ಕರ್ ಉದ್ಯಾನದ ಮುಂಭಾಗದಿಂದ ಬಂದು, ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಸಂಚರಿಸುತ್ತಿತ್ತು. ಇದೇ ವೇಳೆ ವೃದ್ಧೆ ಲಗುಬಗೆಯಿಂದ ರಸ್ತೆ ದಾಟುತ್ತಿದ್ದರು. ಬಸ್ ಎಡಭಾಗಕ್ಕೆ ತಿರುಗುದ್ದರಿಂದ ವೃದ್ಧ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಕ್ಕಿಕೊಂಡರು. ಅವರ ದೇಹದ ಮೇಲೆಯೇ ಬಸ್ ಹರಿದಿದ್ದರಿಂದ ಸ್ಥಳದಲ್ಲೇ ಕೊನೆಯುಸಿರೆಳೆದರು.
ಸಾವು ಸಂಭವಿಸುತ್ತಿದ್ದಂತೆಯೇ ಧಾವಿಸಿದ ಪೊಲೀಸರು ಜನರನ್ನು ಚದುರಿಸಿ, ಶವನ್ನು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ವೃತ್ತದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ ಎಂಬ ಕಾರಣ ಕೆಲವೇ ನಿಮಿಷಗಳಲ್ಲಿ ದೇಹವನ್ನು ಸ್ಥಳದಿಂದ ಸಾಗಿಸಲಾಯಿತು.
‘ವೃದ್ಧೆ ನಡೆದುಕೊಂಡು ಹೊರಟಿದ್ದರು. ಬಸ್ ಏಕಾಏಕಿ ಅವರ ಮೇಲೆ ಹರಿದು ಅವಘಡ ಸಂಭವಿಸಿದೆ. ಇದರಲ್ಲಿ ಯಾರ ತಪ್ಪಿದೆ ಎಂಬುದನ್ನು ಪರಿಶೀಲಿಸಿ ಪ್ರಕರಣ ದಾಖಲಿಸಲಾಗುವುದು’ ಎಂದು ಮಾರ್ಕೆಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.