ಬೆಳಗಾವಿ: ‘ಕೇಂದ್ರ ಸರ್ಕಾರದಿಂದ ತಲಾ 20 ಟನ್ ವೈದ್ಯಕೀಯ ಆಮ್ಲಜನಕ ಸಂಗ್ರಹ ಸಾಮರ್ಥ್ಯದ 6 ಟ್ಯಾಂಕರ್ಗಳು ಮೇ 15ರಂದು ರಾಜ್ಯಕ್ಕೆ ಬರಲಿದ್ದು, ಬೆಳಗಾವಿಗೆ ಒಂದನ್ನು ಹಂಚಿಕೆ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ವಿಡಿಯೊ ಹೇಳಿಕೆಯನ್ನು ಬುಧವಾರ ಬಿಡುಗಡೆ ಮಾಡಿರುವ ಅವರು, ‘ಹಂಚಿಕೆ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.
‘ಜಿಲ್ಲೆಗೆ ಆಮ್ಲಜನಕ ಹಂಚಿಕೆ ಪ್ರಮಾಣ ಹೆಚ್ಚಾಗಿದೆ. 24 ಕೆ.ಎಲ್. ನೀಡಲಾಗಿದೆ. ಅದನ್ನು 30 ಕೆ.ಎಲ್.ಗೆ ಹೆಚ್ಚಿಸುವಂತೆ ಕೋರಿದ್ದೇನೆ. ರೆಮ್ಡಿಸಿವಿರ್ ಚುಚ್ಚುಮದ್ದು ಕೂಡ ದುಪ್ಪಟ್ಟಾಗಿದೆ. ಹಾಸಿಗೆಗಳನ್ನು ಕೂಡ ಹೆಚ್ಚಿಸಲಾಗುವುದು. ಇದರಿಂದ ಕೋವಿಡ್ ನಿರ್ವಹಣೆಗೆ ಸಹಕಾರಿಯಾಗಲಿದೆ. ಆಮ್ಲಜನಕ ಲಭ್ಯತೆ ಹೆಚ್ಚಾದಂತೆ ಎಲ್ಲ ತಾಲ್ಲೂಕುಗಳಲ್ಲೂ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.