ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರವಾಗಿ ಪಕ್ಷದ ನಾಯಕರೂ ಆಗಿರುವ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಗುರುವಾರ ಪ್ರಚಾರ ನಡೆಸಿ, ಮತ ಯಾಚಿಸಿದರು.
ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿ, ನಸಲಾಪುರ, ಕೆಂಪಟ್ಟಿ, ಜಲಾಲಪುರ, ದಿಗ್ಗೇವಾಡಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಿದರು. ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕವಟಗಿಮಠ ರೈತರ ಗಟ್ಟಿಧ್ವನಿಯಾಗಿದ್ದಾರೆ. ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಬೇಕು’ ಎಂದು ಕೋರಿದರು.
‘ಈ ಭಾಗದಲ್ಲಿ ಕವಟಗಿಮಠ ಅನೇಕ ಸಾಮಾಜಿಕ ಕೆಲಸ ಕೈಗೊಂಡಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ಜನರಿಗಾಗಿ ದನಿ ಎತ್ತಿದ್ದಾರೆ’ ಎಂದರು.
ರಾಯಬಾಗ ಶಾಸಕ ಡಿ.ಎಂ. ಐಹೊಳೆ, ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತ ಬನವಣೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ತಾತ್ಯಾಸಾಬ ಕಾಟೆ, ಮಲ್ಲಪ್ಪ ಮಹಿಷಾಳೆ, ರಾಮಚಂದ್ರ ನಿಶಾನದಾರ, ಮಹೇಶ ಭಾತೆ, ಅಮಿತ ಜಾಧವ್, ಶಿವು ನಾಯಕ ಉಪಸ್ಥಿತರಿದ್ದರು.