ಬೆಳಗಾವಿ: ‘ಇಂದಿನ ತಾಂತ್ರಿಕ ಯುಗದಲ್ಲೂ ಜನಪದ ಸಾಹಿತ್ಯ ಪ್ರಸ್ತುತವಾಗಿದೆ. ಅದರಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ. ಮನುಷ್ಯನಿಗೆ ಬದುಕುವ ದಾರಿಯನ್ನು ತೋರಿಸುತ್ತವೆ’ ಎಂದು ಸಾಹಿತಿ ಲಕ್ಷ್ಮಿ ಅರಿಬೆಂಚಿ ಹೇಳಿದರು.
ಇಲ್ಲಿನ ಕೆಎಲ್ಇ–ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಕನ್ನಡ ಬಳಗದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜನಪದ ಸಾಹಿತ್ಯ ಉಳಿಸಿ– ಬೆಳೆಸಬೇಕು. ಇದು ಕನ್ನಡ ಬಳಗದಂತಹ ಸಂಘಟನೆಗಳಿಂದ ಮಾತ್ರ ಸಾಧ್ಯ’ ಎಂದರು.
ಚಲನಚಿತ್ರ ನಟ ಸಂತೋಷ ಜಾವರೆ ಮಾತನಾಡಿ, ‘ಗಡಿ ಬೆಳಗಾವಿಯಲ್ಲಿ ಕನ್ನಡ ಕಾರ್ಯಕ್ರಮಗಳ ಅಗತ್ಯ ಬಹಳ ಇದೆ’ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಬಸವರಾಜ ಕಟಗೇರಿ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಮುಖ್ಯಸ್ಥ ಎಸ್.ಸಿ. ಮೆಟಗುಡ್ ಅಧ್ಯಕ್ಷತೆ ವಹಿಸಿದ್ದರು.
ಸಹನಾ ಹಾಗೂ ಸೃಷ್ಠಿ ನಾಡಗೀತೆ ಹಾಡಿದರು. ಡಾ.ಎಚ್.ಪಿ. ರಜನಿ ಸ್ವಾಗತಿಸಿದರು. ಡಾ.ರವಿರಾಜ ಹವಾಲ್ದಾರ ಪರಿಚಯಿಸಿದರು. ಸಾಗರ ಹುಬ್ಬಳ್ಳಿ ವಂದಿಸಿದರು.