ಮೋಳೆ/ಕಾಗವಾಡ: ‘ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಮ್ಮನ್ನು ತರಾಟೆಗೆ ತೆಗೆದುಕೊಂಡ ನೆರೆ ಸಂತ್ರಸ್ತರ ಬಗ್ಗೆ ಜವಳಿ ಸಚಿವ ಶ್ರೀಮಂತ ಪಾಟೀಲ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಮೂಲಕ ಜನರನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು ಕಾಗವಾಡದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಪರಿಮಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.
‘ಸಚಿವರು ತಕ್ಷಣವೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಅವರನ್ನು ಸಚಿವ ಸ್ಥಾನದಿಂದ ಕೆಳಗಿಸಳಿಸಬೇಕು’ ಎಂದು ಒತ್ತಾಯಿಸಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ‘ಹೋದ ವರ್ಷ ನೆರೆ ಹಾಗೂ ಅತಿವೃಷ್ಟಿಯಿಂದಾಗಿ ಸಾವಿರಾರು ರೈತರು ಮನೆ, ಬೆಳೆ ಜಾನುವಾರು ಕಳೆದುಕೊಂಡು ಕಂಗಾಲಾಗಿದ್ದಾರೆ. ಅರ್ಹ ಫಲಾನುಭವಿಗಳಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ಮೊಳವಾಡದಲ್ಲಿ ಸಂತ್ರಸ್ತರು ಪ್ರಶ್ನಿಸಿದಾಗ ಸಚಿವರು ಸಮಾಧಾನದಿಂದ ಉತ್ತರಿಸದೆ ಹೋಗಿದ್ದಾರೆ. ಅವರು ಸಂತ್ರಸ್ತರಲ್ಲ ಕುಡುಕರು ಎಂದು ಹೇಳಿಕೆ ನೀಡಿ ಅವಮಾನಿಸಿದ್ದಾರೆ’ ಎಂದು ದೂರಿದರು.
ಆಮ್ ಆದ್ಮಿ ಪಕ್ಷ ಕಾಗವಾಡ ಬ್ಲಾಕ್ ಅಧ್ಯಕ್ಷ ಬಾಳಾಸಾಹೇಬ ರಾವ್, ದೀಪಕ ಶೀಂಧೆ, ಮಹೇಶ ಮೆಟಗೇರಿ, ಸುನೀಲ ಶೇಡಬಾಳೆ, ಪೋಪಟ ಅವಳೇಕರ, ಮಹಾಂತೇಶ ಬಾಡಗಿ, ಸಿದಗೌಡ ಹಿಪ್ಪರಗಿ, ಶಬ್ಬೀರ ಸಾತಬಚ್ಚೆ ಇದ್ದರು.