ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಧರಣಿ: ಎರಡು ತಾಸು ಸಂಚಾರ ಬಂದ್‌

ಹೋರಾಟದಲ್ಲಿ ಪಾಲ್ಗೊಂಡ ಸಚಿವರು
Published 13 ಡಿಸೆಂಬರ್ 2023, 11:36 IST
Last Updated 13 ಡಿಸೆಂಬರ್ 2023, 11:36 IST
ಅಕ್ಷರ ಗಾತ್ರ

ಬೆಳಗಾವಿ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲೇಬೇಕು ಎಂದು ಆಗ್ರಹಿಸಿ, ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಬುಧವಾರ ಎರಡು ತಾಸು ಧರಣಿ ನಡೆಸಲಾಯಿತು.

ಕೂಡಲಸಂಗಮ ಪಂಚಮಸಾಲಿ ‍ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕ ಹೋರಾಟ ನಡೆಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ, ಅಶೋಕ ಮನಗೂಳಿ, ಮಾಜಿ ಶಾಸಕರಾದ ಎಚ್.ಎಂ.ಶಿವಶಂಕರಪ್ಪ, ಎ.ಬಿ.ಪಾಟೀಲ, ಶಶಿಕಾಂತ ನಾಯಿಕ ಸೇರಿದಂತೆ ಹಲವು ಮುಖಂಡರು ಧಣಿಯಲ್ಲಿ ಪಾಲ್ಗೊಂಡರು.

‘ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚೆನ್ನಾಗಿದ್ದೇನೆ ಎಂದು ಬಹಳ ಜನ ಹೇಳುತ್ತಾರೆ. ನಾವು ಯಾರ ಜತೆಗೆ ಚೆನ್ನಾಗಿದ್ದರೂ, ಚೆನ್ನಾಗಿ ಇರದಿದ್ದರೂ ಸಮಾಜಕ್ಕಾಗಿ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ. ಸರ್ಕಾರಗಳು ಬರುತ್ತವೆ– ಹೋಗುತ್ತವೆ. ಮೀಸಲಾತಿ ಪಡೆಯುವವರೆಗೆ ಸುಮ್ಮನೇ ಕುಳಿತುಕೊಳ್ಳುವುದಿಲ್ಲ’ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದರು.

ಹೋರಾಟ ಸಮಿತಿ ಅಧ್ಯಕ್ಷರೂ ಆದ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ನಮ್ಮ ಸರ್ಕಾರ ಇದ್ದಾಗ ನಾನು ಮುಖ್ಯಮಂತ್ರಿ ವಿರುದ್ಧವೇ ಸಿಡಿದೆದ್ದು ಹೋರಾಡಿದ್ದೇನೆ. ಈಗ ಕಾಂಗ್ರೆಸ್‌ ಸರ್ಕಾರವಿದೆ. ಕಾಂಗ್ರೆಸ್‌ನಲ್ಲಿರುವ ನಮ್ಮ ಸಮಾಜದ ಸಚಿವರು, ಶಾಸಕರು ಸಮಾಜದ ಪರವಾಗಿ ನಿಲ್ಲಬೇಕು’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ವಾರಗಳ ಅವಕಾಶ ಕೇಳಿದ್ದಾರೆ. ಕಾನೂನು ತೊಡಕು ಹಾಗೂ ಸಾಧ್ಯತೆಗಳ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ ಎಂದಿದ್ದಾರೆ. ಇನ್ನೆರಡು ವಾರ ಕಾಯೋಣ. ಲೋಕಸಭೆ ಚುನಾವಣೆ ಬರುವುದೊಳಗೆ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಕ್ರಾಂತಿ ಆಗಲಿದೆ’ ಎಂದೂ ಎಚ್ಚರಿಸಿದರು.

‘ಇದೂವರೆಗೆ ಪಂಚಮಸಾಲಿ ಸಮಾಜಕ್ಕೆ ಹೋರಾಟ ಮಾಡದೆ ಏನೂ ಸಿಕ್ಕಿಲ್ಲ. ರಾಣಿ ಚನ್ನಮ್ಮ ರಕ್ತ ಪಂಚಮಸಾಲಿಗರ ಮೈಯಲ್ಲಿ ಹರಿಯುತ್ತಿದೆ. ನಾನು ಸಮಾಜದ ಮಗಳಾಗಿ ಹೋರಾಟಕ್ಕೆ ಬಂದಿದ್ದೇನೆ. ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿ ಮೀಸಲಾತಿ ಪಡೆಯಲು ಯತ್ನಿಸುತ್ತೇನೆ’ ಎಂದು ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರದ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಸಮಾಜದಿಂದ ಒತ್ತಡ ಕೇಳಿ ಬಂದಿದೆ. ಮುಖ್ಯಮಂತ್ರಿ ಅವರು ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ಅಲ್ಲಿಯವರೆಗೂ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರೂ ಆದ ವಿಜಯಾನಂದ ಕಾಶಪ್ಪನವರ, ‘ಕಾಂಗ್ರೆಸ್‌ ಸರ್ಕಾರ ಬಂದಿದೆ ಎಂದಮಾತ್ರಕ್ಕೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮೀಸಲಾತಿ ಕುರಿತು ಸುಪ್ರೀಂ ಕೊರ್ಟ್‌ನಲ್ಲಿ ಒಬ್ಬರು ತಡೆಯಾಜ್ಞೆ ಸಲ್ಲಿಸಿದ್ದಾರೆ. ಅದು ತೆರವು ಆಗುವವರೆಗೆ ಏನೂ ಮಾಡಲು ಸಾಧ್ಯವಿಲ್ಲ. ಕೊನೆಯವರೆಗೂ ಹೋರಾಡುತ್ತೇವೆ. ಮೀಸಲಾತಿ ಪಡೆಯುತ್ತೇವೆ ಇಲ್ಲವೇ, ಮಡಿಯುತ್ತೇವೆ’ ಎಂದರು.

ಚನ್ನಮ್ಮ ವೃತ್ತದಲ್ಲಿ ಎರಡು ತಾಸು ಧರಣಿ ನಡೆಸಿದ್ದರಿಂದ ನಾಲ್ಕೂ ದಿಕ್ಕಿನ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಾಹನ ಸವಾರರು ನಗರ ಸುತ್ತುಹಾಕಿ ಸಂಚರಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT