ಅಥಣಿ (ಬೆಳಗಾವಿ ಜಿಲ್ಲೆ): ಇಲ್ಲಿನ ಬ್ಲಾಕ್ ಕಾಂಗ್ರೆಸ್ ಮುಖಂಡರು ಪುರಸಭೆ ಆವರಣದಲ್ಲಿ 50 ಪೌರಕಾರ್ಮಿಕರ ಪಾದ ಪೂಜಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ್ಮದಿನವನ್ನು ವಿನೂತನವಾಗಿ ಶನಿವಾರ ಆಚರಿಸಿದರು.
‘ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತಿನಂತೆ ನಿಜ ಶ್ರಮಜೀವಿಗಳಾದ ಪೌರಕಾರ್ಮಿಕರ ಪಾದ ಪೂಜೆ ಮಾಡುವುದು ನಿಜವಾದ ಪರಮಾತ್ಮನನ್ನು ಪೂಜಿಸಿದಂತೆಯೇ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಹೇಳಿದರು.
ಪೌರಕಾರ್ಮಿಕರಿಗೆ ಅಭಿನಂದನಾ ಪತ್ರವನ್ನೂ ನೀಡಲಾಯಿತು.
ಮುಖಂಡ ಗಜಾನನ ಮಂಗಸೂಳಿ, ‘ಕೋವಿಡ್ ಭೀತಿ ನಡುವೆಯೂ ಪೌರಕಾರ್ಮಿಕರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಅವರ ಕಾರ್ಯ ಶ್ಲಾಘನೀಯ’ ಎಂದರು.
ಮುಖಂಡ ಸುನಿಲ ಸಂಕ, ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾತನಾಡಿದರು.