ಆರ್ಸಿ ಕಚೇರಿ ರದ್ದತಿಗೆ ವಿರೋಧ

ಬೆಳಗಾವಿ: ‘ಕಂದಾಯ ಇಲಾಖೆ ಆಧೀನದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸುವುದನ್ನು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ತೀವ್ರವಾಗಿ ವಿರೋಧಿಸುತ್ತದೆ’ ಎಂದು ಅಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದ್ದಾರೆ.
‘ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಇಂತಹ ಕಚೇರಿಗಳನ್ನು ರದ್ದುಪಡಿಸಿ ಬೆಂಗಳೂರಿನಲ್ಲೇ ಕಂದಾಯ ಆಯುಕ್ತಾಲಯ ಸ್ಥಾಪಿಸುವಂತೆ ಆಡಳಿತ ಸುಧಾರಣೆ ಆಯೋಗ ಶಿಫಾರಸು ಮಾಡಿರುವುದು ಖಂಡನೀಯ’ ಎಂದು ಹೇಳಿದ್ದಾರೆ.
‘ಈ ಕಚೇರಿಗೆ ಮೇಲ್ಮನವಿ ವಿಚಾರಣೆ ಮತ್ತು ಕ್ರಮ ಕೈಗೊಳ್ಳುವ ಅಧಿಕಾರ ಇರುವುದರಿಂದ ರೈತರು ಮತ್ತು ಸಾರ್ವಜನಿಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜೊತೆಗೆ ಅಧಿಕಾರ ವಿಕೇಂದ್ರೀಕರಣದಿಂದ ಸಾಮಾನ್ಯರ ಮನೆ ಬಾಗಿಲಲ್ಲೇ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ. ಪ್ರಾದೇಶಿಕ ಆಯುಕ್ತರಿಗೆ ಇನ್ನಷ್ಟು ಅಧಿಕಾರ ನೀಡಿದರೆ ಆಡಳಿತ ಬಲಗೊಳ್ಳುತ್ತದೆ. ಇದರ ಬದಲಿಗೆ ಕಚೇರಿಯನ್ನೇ ರದ್ದುಪಡಿಸಿದರೆ ಉತ್ತರ ಕರ್ನಾಟಕದ ಜನತೆ ಸಮಸ್ಯೆಗಳನ್ನು ಹಿಡಿದುಕೊಂಡು ಬೆಂಗಳೂರಿಗೆ ಅಲೆಯಬೇಕಾಗುತ್ತದೆ. ಅಲ್ಲದೇ ನ್ಯಾಯ ಪಡೆಯಲು ಸಾಧ್ಯವಾಗದೆಯೂ ಹೋಗಬಹುದು’ ಎಂದು ತಿಳಿಸಿದ್ದಾರೆ.
‘ಹೀಗಾಗಿ, ಕಚೇರಿಯನ್ನು ಇಲ್ಲಿಯೇ ಮುಂದುವರಿಸಬೇಕು. ಪ್ರಾದೇಶಿಕ ಆಡಳಿತ ಅಸಮತೋಲನ ನಿವಾರಣೆಗೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಪ್ರಾದೇಶಿಕ ಕಚೇರಿ ಎದುರು ಸತ್ಯಾಗ್ರಹ ನಡೆಸಬೇಕಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.