ರಾಮದುರ್ಗ: ಗಿಡ-ಮರ, ಕೆರೆ-ಕಟ್ಟೆಗಳು ಮಾಯವಾಗಿ ಕಾಂಕ್ರೀಟ್ ಕಾಡು ಬೆಳೆಯುತ್ತಿರುವ ಕಾರಣ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಲವಕುಮಾರ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕಿನ ಪಂಚಗಾಂವಿ ಗ್ರಾಮದಲ್ಲಿ ಪುನಶ್ಚೇತನಗೊಂಡ 635ನೇ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಊರ ಮಧ್ಯೆ ಆಲದ ಮರ ಹಾಗೂ ಊರಿಗೊಂದು ಕೆರೆ ಇರಬೇಕು ಎಂದು ಹೇಳಲಾಗುತ್ತಿದೆ. ಕಾಲ ಬದಲಾದಂತೆ ಗಿಡ–ಮರಗಳು, ಕೆರೆ ಕಟ್ಟೆಗಳು ಉಳ್ಳವರ ಪಾಲಾಗುತ್ತಿವೆ’ ಎಂದು ಹೇಳಿದರು.
‘ಕೆರೆಗಳು ತುಂಬಿ ಹರಿದರೆ ಗ್ರಾಮದಲ್ಲಿನ ಸೊಬಗು ಹೆಚ್ಚುತ್ತದೆ. ಹೀಗಾಗಿ ಧರ್ಮಸ್ಥಳ ಸಂಸ್ಥೆ ಹೂಳು ತುಂಬಿದ ಮತ್ತು ನಿರುಪಯುಕ್ತವಾದ ಕೆರೆಗಳನ್ನು ದತ್ತು ಪಡೆದು ಹೂಳು ತೆಗೆದು ಅದೇ ಗ್ರಾಮಕ್ಕೆ ಹಸ್ತಾಂತರಿಸುವ ಕಾರ್ಯವನ್ನು ಕಳೆದ 8 ವರ್ಷಗಳಿಂದ ನಡೆಸುತ್ತಿದೆ. ಈಗಾಗಲೆ ರಾಜ್ಯದಲ್ಲಿ 700 ಕೆರೆಗಳು ಅಭಿವೃದ್ಧಿ ಕಂಡು ಸಮೃದ್ಧವಾಗಿ ನೀರು ತುಂಬಿ ಕಂಗೊಳಿಸುತ್ತಿವೆ’ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕುಳ್ಳೂರು ಮಠದ ಬಸವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ‘ಮಾನವ ಜೀವನ ನೀರಿನೊಂದಿಗೆ ಆರಂಭವಾಗಿ ನೀರಿನೊಂದಿಗೆ ಮುಕ್ತಾಯವಾಗುತ್ತದೆ. ಅಂತಹ ಪವಿತ್ರ ನೀರನ್ನು ಉಳಿಸಲು ಧರ್ಮಸ್ಥಳ ಸಂಸ್ಥೆ ಪಣ ತೊಟ್ಟಿದೆ’ ಎಂದು ಹೇಳಿದರು.
ನಾಮಫಲಕ ಅನಾವರಣಗೊಳಿಸಿದ ಉದಪುಡಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅರ್ಜುನ ಬಡಿಗೇರ, ಕೆರೆ ಸಮಿತಿ ಅಧ್ಯಕ್ಷ ರುದ್ರಗೌಡ ಪಾಟೀಲ ಮಾತನಾಡಿದರು.
ಗ್ರಾಮದ ಹಿರಿಯರಾದ ಕಾಜಾಮೀರ ಖಾಜಿ, ಗೋಪಾಲ ಲಕ್ಷಾಣಿ, ಶಂಕರಗೌಡ ಪಾಟೀಲ, ಸದಸ್ಯೆ ಗೀತಾ ಮಿರ್ಜಿ, ಜಿ.ಬಿ. ರಂಗನಗೌಡ್ರ ಇದ್ದರು.
ಧಾರವಾಡ ಪ್ರಾದೇಶಿಕ ವಿಭಾಗದ ಕೆರೆ ಎಂಜಿನಿಯರ್ ನಿಂಗರಾಜ ಮಾಳವಾಡ ಪ್ರಾಸ್ತಾವಿಕ ಮಾತನಾಡಿದರು. ಲೋಕೇಶ ಅರುಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕೃಷಿ ಅಧಿಕಾರಿ ಪ್ರದೀಪ ವಂದಿಸಿದರು.