ಬೆಳಗಾವಿ: ಇಲ್ಲಿಗೆ ಸಮೀಪದ ಹಾಲಗಾದಿಂದ ಮಚ್ಚೆಯವರೆಗೆ ನಿರ್ಮಾಣವಾಗುತ್ತಿರುವ ರಿಂಗ್ ರೋಡ್ (ವರ್ತುಲ ರಸ್ತೆ) ಕಾಮಗಾರಿಗೆ ತಡೆಯೊಡ್ಡಿದ್ದ ರೈತರಿಗೆ ಶನಿವಾರ ಪೊಲೀಸರು ಎಚ್ಚರಿಕೆ ನೀಡಿದರು. ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಮುಂದುವರಿಯಿತು.
ಬಾಳಾರಾಮ ಪೋಟೆ, ಸುಭಾಷ ಲಾಡ ಹಾಗೂ ದೇವಿದಾಸ ಪಾಟೀಲ ಅವರು ಕಾಮಗಾರಿ ಸ್ಥಳಕ್ಕೆ ಆಗಮಿಸಿ ವಿರೋಧ ವ್ಯಕ್ತಪಡಿಸಿದರು. ತಮ್ಮ ಜಮೀನುಗಳಲ್ಲಿ ರಸ್ತೆ ನಿರ್ಮಿಸಬೇಡಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಜೆಸಿಬಿ ಕೆಲಸ ಮಾಡದಂತೆ ತಡೆಯೊಡ್ಡಿದರು.
ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು, ರೈತರ ಮನವೊಲಿಸಲು ಪ್ರಯತ್ನಿಸಿದರು. ನ್ಯಾಯಾಲಯದಿಂದ ತಡೆಯಾಜ್ಞೆ ಇಲ್ಲದ ಕಾರಣ, ಸರ್ಕಾರಿ ಕಾಮಗಾರಿಗೆ ತಡೆಯೊಡ್ಡಬಾರದೆಂದು ಸಮಾಧಾನಪಡಿಸಿ ಕಳುಹಿಸಿದರು. ಕಾಮಗಾರಿ ಮುಂದುವರಿಯಲು ಅನುವು ಮಾಡಿಕೊಟ್ಟರು.