ಬೆಳಗಾವಿ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲು ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಳಿಕ ನಿರ್ಧಾರ ಹೇಳುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯತ್ನಾಳ ಅವರು ಪ್ರಚಾರಕ್ಕಾಗಿ ಗಾಳಿಯಲ್ಲಿ ಗುಂಡು ಹೊಡೆಯಬಾರದು. ಧರ್ಮಗುರುಗಳ ಮೇಲಿನ ಆಪಾದನೆ ಸಾಬೀತು ಮಾಡಲಿ’ ಎಂದು ಸವಾಲು ಹಾಕಿದರು.
‘ಮುಸ್ಲಿಂ ಧರ್ಮಗುರುಗಳ ಬಗ್ಗೆ ಯತ್ನಾಳ ಹಗುರವಾಗಿ ಮಾತನಾಡಿದ್ದಾರೆ. ಐಎಸ್ ನಂಟಿದ್ದವರು ವೇದಿಕೆ ಎಂದು ಯತ್ನಾಳ ಯಾವ ಸಭೆಯ ಬಗ್ಗೆ ಹೇಳಿದ್ದಾರೋ ಅದರಲ್ಲಿ ನಾನೂ ಇದ್ದೆ. ಅಂತಹ ಯಾವುದೇ ಘಟನೆ ನಡೆದಿಲ್ಲ. ಆ ವೇದಿಕೆಯಲ್ಲಿ ಅಂಥವರು ಯಾರೂ ಕುಳಿತಿರಲಿಲ್ಲ. ಕೀಳುಮಟ್ಟದ ಹೇಳಿಕೆ ಕೊಡುವುದನ್ನು ಬಿಡಬೇಕು’ ಎಂದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ, ‘ಯತ್ನಾಳ ಮೌಲ್ವಿ ಅವರ ಮೇಲೆ ಸಾಕ್ಷಿ ಸಮೇತ ಆರೋಪ ಮಾಡಬೇಕು. ಸಾಕ್ಷಿ ಇದ್ದರೆ ಮಾತ್ರ ಆರೋಪಕ್ಕೆ ಅರ್ಥ ಬರುತ್ತದೆ. ಕೇಂದ್ರ ಗೃಹ ಸಚಿವರು ಈ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ’ ಎಂದರು.