ಬೆಳಗಾವಿ: ‘ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಪುಸ್ತಕಗಳ ಪಾತ್ರ ಹಿರಿದಾದುದು’ ಎಂದುಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಇಲ್ಲಿನ ಕೃಷ್ಣದೇವರಾಯ ವೃತ್ತ ಸಮೀಪ ಗುರುವಾರ ನಡೆದ ಸಪ್ನ ಬುಕ್ಹೌಸ್ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರಸ್ತುತ ಯುವಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳಿಗೆ ಅಲೆಯುವ ಅಗತ್ಯವಿಲ್ಲ’ ಎಂದರು.
‘ಪುಸ್ತಕ ಮಾರುವುದೇ ಒಂದು ಹೋರಾಟ ಎಂಬ ದಿನಮಾನಗಳಲ್ಲಿ, ಆಧುನಿಕ ತಂತ್ರಜ್ಞಾನವನ್ನು ಸಪ್ನ ಬುಕ್ ಹೌಸ್ ಅಳವಡಿಸಿಕೊಂಡು ಮುನ್ನಡೆಯುತ್ತಿದೆ. ಗಡಿ ಜಿಲ್ಲೆಯಲ್ಲಿ ಶಾಖೆ ಆರಂಭಿಸಿರುವುದು ಸಂತಸ ತಂದಿದೆ’ ಎಂದರು.
ವಿಧಾನಪರಿಷತ್ ಮುಖ್ಯಸಚೇತನಕ ಮಹಾಂತೇಶ ಕವಟಗಿಮಠ ಮಾತನಾಡಿ, ‘ಪುಸ್ತಕಗಳು ವ್ಯಕ್ತಿಯನ್ನು ಸಮಾಜಮುಖಿ ನಾಗರಿಕನನ್ನಾಗಿ ಮಾಡುತ್ತವೆ. ಸುಸಂಸ್ಕೃತ ಸಮಾಜ ಹಾಗೂ ದೇಶ ಅಭಿವೃದ್ಧಿ ಹೊಂದಲು ಕಾರಣವಾಗಿವೆ’ ಎಂದು ಹೇಳಿದರು.
ಸಾಹಿತಿ ಸರಜೂ ಕಾಟ್ಕರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮಾತನಾಡಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ, ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ, ಸಾಹಿತಿಗಳಾದ ಡಾ.ಬಸವರಾಜ ಜಗಜಂಪಿ, ಜಿನದತ್ತ ದೇಸಾಯಿ, ಚಂದ್ರಕಾಂತ ಕುಸನೂರ ಇದ್ದರು.
ಡಾ.ಮೈತ್ರೀಯಿಣಿ ಗದಿಗೆಪ್ಪಗೌಡರ, ಆಶಾ ಯಮಕನಮರಡಿ ನಿರೂಪಿಸಿದರು. ಡಾ.ಆರ್. ದೊಡ್ಡೇಗೌಡ ವಂದಿಸಿದರು.