ಅಥಣಿ: ‘ಬಿಜೆಪಿಯು ಕೆಳಮಟ್ಟದ ಕಾರ್ಯಕರ್ತನಾದ ನನ್ನನ್ನು ಗುರುತಿಸಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿದೆ. ಈ ಮೂಲಕ ಕಾರ್ಯಕರ್ತರಿಗೆ ಒಳ್ಳೆಯ ಸಂದೇಶ ರವಾನಿಸಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬುಧವಾರ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪಕ್ಷದ ನೂರಾರು ಕಾರ್ಯಕರ್ತರು ಭೇಟಿಯಾಗಲು ಬರುವುದಕ್ಕಿಂತ ಮುಂಚಿತವಾಗಿ ನಾನೇ ಅವರ ಬಳಿಗೆ ಬಂದಿದ್ದೇನೆ. ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಮಠಾಧೀಶರ ಆಶೀರ್ವಾದ ಪಡೆಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ವಿಚಾರವಾಗಿ ಪ್ರವಾಸ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.
ಗಚ್ಚಿನಮಠದಲ್ಲಿ ಶಿವಬಸವ ಸ್ವಾಮೀಜಿ ಹಾಗೂ ಶೆಟ್ಟರಮಠದಲ್ಲಿ ಶ್ರೀಗಳಿಂದ ಆಶೀರ್ವಾದ ಪಡೆದರು. ಮುಖಂಡರಾದ ಉಮೇಶರಾವ ಬೊಂಟೊಡಕರ, ವಿನಯಗೌಡ ಕುಲಕರ್ಣಿ, ಪುಟ್ಟು ಹಿರೇಮಠ, ದಿಲೀಪ ಕಾಂಬಳೆ, ಅನಿಲ ಮೋರೆ ಇದ್ದರು.