ಬೆಳಗಾವಿ: ‘ಧರ್ಮವು ಸೃಷ್ಟಿಯ ಹುಟ್ಟಿನಿಂದಲೇ ಬಂದಿದೆಯೇ ಹೊರತು, ಜಾತಿಯಿಂದಲ್ಲ’ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ಸೇನೆ ಸಹಯೋಗದಲ್ಲಿ ಆಯೋಜಿಸಿರುವ ‘ಶರಣ ದರ್ಶನ’ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪರಸ್ಪರ ಪ್ರೀತಿ–ವಿಶ್ವಾಸದಿಂದ ಎಲ್ಲರಿಗೂ ಗೌರವ ಕೊಟ್ಟು ತಾವೂ ಗೌರವದಿಂದ ಬದುಕುವುದೇ ನಿಜವಾದ ಧರ್ಮ. ಹಲವು ಸಂತರು, ದಾರ್ಶನಿಕರು, ಧರ್ಮದ ತತ್ವ–ಸಿದ್ಧಾಂತಗಳ ಮೂಲಕ ಧರ್ಮದ ಬೋಧನೆ ಮಾಡಿದರೂ ಮೂಲ ಧರ್ಮದ ಸಿದ್ಧಾಂತ ಒಂದೇ. ಅದನ್ನರಿಯದೇ ನಾವು ಸಹಜ ಬದುಕನ್ನೇ ದುಸ್ತರವಾಗಿಸಿಕೊಂಡು ಬದುಕುತ್ತಿದ್ದೇವೆ’ ಎಂದರು.
‘ಧರ್ಮ, ಧಾರ್ಮಿಕತೆ, ಅದ್ಯಾತ್ಮವನ್ನು ಬೇರೆ ಬೇರೆ ರೀತಿಯಲ್ಲಿ ಗುರುತಿಸಲಾಗಿದೆ. ದಯೆ, ಕರುಣೆ, ಪ್ರೀತಿ, ಸಮಾನತೆ ಇವು ಧಾರ್ಮಿಕತೆಯ ಸಂಕೇತಗಳು. ಅವುಗಳನ್ನು ಆಚರಣೆಗೆ ತಂದು ನಾವೂ ಬದುಕಿ, ಮತ್ತೊಬ್ಬರಿಗೆ ಬದುಕಲು ಅವಕಾಶ ಮಾಡಿಕೊಡುವುದೇ ಅಧ್ಯಾತ್ಮವಾಗಿದೆ’ ಎಂದು ಹೇಳಿದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಬಳ್ಳೇರಿಯ ಬಸವಾನಂದ ಸ್ವಾಮೀಜಿ, ಸಿದ್ಧರಾಮ ಪಟ್ಟದದೇವರು, ಗದಗ ತೋಂಟದಾರ್ಯ ಮಠದ ಮಹಾಂತದೇವರು, ಶರಣ ಬಾಬಾಸಾಹೇಬ ಪಾಟೀಲ ಇದ್ದರು.