ಐಆರ್ಎಸ್ ಅಧಿಕಾರಿ ಶಿವಾನಂದ ಎಚ್. ಹಾಲಕೇರಿ ಅವರನ್ನು ನಿರ್ದೇಶಕನ್ನಾಗಿ ಅ.1ರಂದು ನೇಮಿಸಲಾಗಿದೆ. ಅವರು ಬಂದು ಅಧಿಕಾರ ಸ್ವೀಕರಿಸಬಹುದು, ಸರ್ಕಾರದ ಆದೇಶದಂತೆ ಕಚೇರಿ ಕಾರ್ಯಾರಂಭ ಮಾಡಬಹುದು ಎಂಬಿತ್ಯಾದಿ ನಿರೀಕ್ಷೆಗಳೊಂದಿಗೆ ಸಿಹಿ ಹಂಚಲು ಬಂದಿದ್ದ ಹೋರಾಟಗಾರರು ಬರಿಗೈಲಿ ವಾಪಸಾದರು. ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಮತ್ತು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮೊದಲಾದವರು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬಂದಿದ್ದರು. ಸಂಬಂಧಿಸಿದ ಅಧಿಕಾರಿ ಬಂದಿರಲಿಲ್ಲವಾದ್ದರಿಂದ, ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ. ಖಾಂಡಗಾವೆ ಅವರೊಂದಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿದರು.