ಬೆಳಗಾವಿ: ‘ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು’ ಎಂದುರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎಸ್. ಸಚ್ಚಿದಾನಂದ ಸಲಹೆ ನೀಡಿದರು.
ತಾಲ್ಲೂಕಿನ ಹಲಗಾ ಗ್ರಾಮದಲ್ಲಿರುವ ಪಿ.ಡಿ. ಭರತೇಶ ನರ್ಸಿಂಗ್ ಕಾಲೇಜಿನ ಬಿ.ಎಸ್ಸಿ. 17ನೇ ಬ್ಯಾಚ್ ಮತ್ತು ಜಿಎನ್ಎಂ 2ನೇ ಬ್ಯಾಚ್ ನರ್ಸಿಂಗ್ ವಿದ್ಯಾರ್ಥಿಗಳ ದೀಪದಾನ ಮತ್ತು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
‘ಶುಶ್ರೂಷಾ ಸಿಬ್ಬಂದಿ ಸಹಾನುಭೂತಿಯಿಂದ ಕಾರ್ಯನಿರ್ವಹಿಸುವ ಮೂಲಕ ವೃತ್ತಿಯ ಮಹತ್ವವನ್ನು ಸಾರಬೇಕು. ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ, ‘ಯುವಜನರು ಇಂತಹ ಉದಾತ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಅಭಿನಂದನಾರ್ಹ’ ಎಂದು ಹೇಳಿದರು.
‘ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ’ ಎಂದರು.
ಪಿ.ಡಿ. ಭರತೇಶ ನರ್ಸಿಂಗ್ ಕಾಲೇಜಿನ ಆಡಳಿತ ಮಂಡಳಿಯ ಸಲಹೆಗಾರ ಡಾ.ದೇವೇಗೌಡ, ‘ಶುಶ್ರೂಷಕರು ವೈದ್ಯಕೀಯ ಆರೈಕೆ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ವೃತ್ತಿಯಲ್ಲಿ ಸಾಕಷ್ಟು ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಹೊಸದಾಗಿ ಪ್ರವೇಶಿಸುವವರು ಸಾಕಷ್ಟು ಕೌಶಲ ಮತ್ತು ವಿಶೇಷತೆ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಡಾ.ಸಾವಿತ್ರಿ ಆರ್.ದೊಡ್ಡಣ್ಣವರ ಅಧ್ಯಕ್ಷತೆ ವಹಿಸಿದ್ದರು. ಭರತೇಶ ಶಿಕ್ಷಣ ಟ್ರಸ್ಟ್ ಖಜಾಂಚಿ ಭೂಷಣ ಮಿರ್ಜಿ, ಆಡಳಿತ ಮಂಡಳಿ ಸದಸ್ಯರಾದ ವಿನೋದ ಎಸ್., ಸುರೇಂದ್ರ ಶಹಾಪುರೆ ಉಪಸ್ಥಿತರಿದ್ದರು.
ಪ್ರಾಚಾರ್ಯ ಸಂಗೀತಾ ಮೋರೇಶ್ವರ ಸ್ವಾಗತಿಸಿದರು. ಮಕ್ಕಳ ಆರೋಗ್ಯ ಶುಶ್ರೂಷೆ ವಿಭಾಗದ ಉಪಪ್ರಾಂಶುಪಾಲ ಮಹೇಶ ರೆಬಿನಾಳ ವಂದಿಸಿದರು.