ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಕಟ್ಟುವ ಸ್ವಾಮೀಜಿಗಳು ಅಗತ್ಯ’

ಹಿರೇಮಠ ಶಾಖೆಯಲ್ಲಿ ಶಿವದೀಕ್ಷೆ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀ
Last Updated 1 ಜುಲೈ 2018, 12:21 IST
ಅಕ್ಷರ ಗಾತ್ರ

ಬೆಳಗಾವಿ: ‘ಇಂದು ಸಮಾಜ ಕಟ್ಟುವ ಸ್ವಾಮೀಜಿಗಳು ಬೇಕಾಗಿದ್ದಾರೆಯೇ ಹೊರತು, ಒಡೆಯುವ ಮತ್ತು ಜನರ ಮನಸ್ಸು ಕಲುಷಿತಗೊಳಿಸುವವರಲ್ಲ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಲಕ್ಷ್ಮಿಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠ ಶಾಖೆಯಲ್ಲಿ ಭಾನುವಾರ ಆಯೋಜಿಸಿದ್ದ ಸುವಿಚಾರ ಚಿಂತನ, ಶಿವದೀಕ್ಷೆ ಹಾಗೂ ಅಯ್ಯಾಚಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.‘ಕೆಲವರು ಧರ್ಮದ ಆಶಯಗಳನ್ನು ಕೆಡಿಸುವ ಪ್ರಯತ್ನ ನಡೆಸಿದ್ದಾರೆ’ ಎಂದು ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಹೋರಾಡುತ್ತಿರುವವರನ್ನು ಪರೋಕ್ಷವಾಗಿ ಟೀಕಿಸಿದರು.

‘ವೀರಶೈವ ಧರ್ಮ ಉತ್ಕೃಷ್ಟ ಆದರ್ಶಗಳನ್ನು ಇಟ್ಟುಕೊಂಡಿದೆ. ಇದರಿಂದಾಗಿಯೇ ಭೌತಿಕ ಮತ್ತು ವೈಚಾರಿಕವಾಗಿ ನಾವು ಸಾಕಷ್ಟು ಬೆಳೆದಿದ್ದೇವೆ. ಆದರೆ, ಧಾರ್ಮಿಕವಾಗಿ ಎಡವಿದ್ದೇವೆ ಎಂಬ ಆತಂಕ ಧರ್ಮಪೀಠವನ್ನು ಕಾಡುತ್ತಿದೆ. ಪಂಚಪೀಠಗಳು, ಸಮನ್ವಯ ಭಾವನೆ ಹೊಂದಿದ ಮಠಾಧೀಶರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಅದನ್ನು ಅನುಸರಿಸಬೇಕು’ ಎಂದರು.

ಸಮರ್ಥವಾಗಿ ನಿಭಾಯಿಸಿ:

‘ಸಮಾಜದಲ್ಲಿ ಪ್ರತಿಯೊಬ್ಬರಿಗೆ ಒಂದೊಂದು ಕರ್ತವ್ಯವಿದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಜನರಿಗೆ ಧರ್ಮದ ಜಾಗೃತಿ ಮೂಡಿಸಬೇಕು. ಈಗ ಧರ್ಮ, ಜಾತಿ ಹೆಸರಲ್ಲಿ ಸಂಘರ್ಷ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅವರವರ ಧರ್ಮ ಅವರಿಗೇ ಶ್ರೇಷ್ಠ. ಸ್ವಧರ್ಮ ನಿಷ್ಠೆ ಇರಬೇಕು ನಿಜ. ಅದರೊಂದಿಗೆ ಪರಧರ್ಮವನ್ನು ಸಹಿಸಿಕೊಳ್ಳುವುದು ಒಳ್ಳೆಯದು. ಆಗ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ’ ಎಂದು ಪ್ರತಿಪಾದಿಸಿದರು.

‘ಜನಪ್ರತಿನಿಧಿಗಳು ಬೇರೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು, ಸಮಾಜದ ಒಳಿತಿಗೆ ದುಡಿಯಬೇಕು’ ಎಂದು ಕಿವಿಮಾತು ಹೇಳಿದರು. ‘ಬೆಳಗಾವಿಯಲ್ಲಿ ಧರ್ಮ, ಸಂಸ್ಕೃತಿ ಪಸರಿಸುವ ಉತ್ತಮ ಧಾರ್ಮಿಕ ಕೇಂದ್ರದ ಅವಶ್ಯಕತೆ ಇತ್ತು. ಹುಕ್ಕೇರಿ ಹಿರೇಮಠ ಈ ಕೊರತೆಯನ್ನು ನೀಗಿಸಿದೆ. ಈ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಧರ್ಮಪೀಠದ ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮಲಿ’ ಎಂದು ಆಶಿಸಿದರು.

ಅನುಕೂಲ ಮಾಡಿಕೊಡಲಿ:

‘ಶಾಸಕ ಮಹಾಂತೇಶ ಕೌಜಲಗಿ, ವಿಧಾನಪರಿಷತ್ ವಿರೋಧಪ‍ಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರಲ್ಲಿ ಧರ್ಮನಿಷ್ಠೆ ಇದೆ. ಉತ್ತರ ಕರ್ನಾಟಕ ಭಾಗದ ಜನರ ನಾಡಿಮಿಡಿತ ಅರಿತು ಅವರು ಕೆಲಸ ಮಾಡಬೇಕು’ ಎಂದು ಸೂಚಿಸಿದರು. ‌ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕದಲ್ಲಿ ಅನ್ಯಾಯವಾಗದಂತೆ ಈ ಭಾಗದ ಜನಪ್ರತಿನಿಧಿಗಳು ದನಿ ಎತ್ತಬೇಕು’ ಎಂದರು.

ಶಾಸಕ ಮಹಾಂತೇಶ ಕೌಜಲಗಿ, ‘ಸ್ವಾಮೀಜಿಗಳ ಆಶಯಗಳನ್ನು ಅಳವಡಿಸಿಕೊಂಡರೆ ಉತ್ತಮವಾಗಿ ಜೀವನ ನಡೆಸಬಹುದು’ ಎಂದು ಅಭಿಪ್ರಾಯಪಟ್ಟರು.

ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಉತ್ತರ ಕರ್ನಾಟಕದ ಜನರ ದನಿಯಾಗಿ ಕೆಲಸ ಮಾಡುತ್ತೇನೆ. ಕೃಷ್ಣಾ ಕಣಿವೆಯ ಜನರ ಗೋಳಿನ ಕುರಿತು ವಿಧಾನಪರಿಷತ್ತಿನಲ್ಲಿ ದನಿ ಎತ್ತುತ್ತೇನೆ’ ಎಂದು ಭರವಸೆ ನೀಡಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ‘ಪಂಚಪೀಠಗಳು ಮಾನವ ಕುಲಕ್ಕೆ ಒಳ್ಳೆಯದಾಗಲಿ ಎಂಬ ಆಶಯದೊಂದಿಗೆ ಮುನ್ನಡೆಯುತ್ತಿವೆ. ಅವುಗಳ ಹಾದಿಯಲ್ಲಿ ನಾವೂ ಸಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT