ಮಮದಾಪೂರ (ಗೋಕಾಕ): ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಇಲ್ಲಿನ ಚಿಂತಾಮಣಿ ಪಾವಟೆ ಪ್ರೌಢಶಾಲೆಯ ಮುಖ್ಯಶಿಕ್ಷಕ ಹಾಗೂ ಶಿಕ್ಷಕರು ‘ಗುರೂಜಿ ಬಂದರು ಗುರುವಾರ’ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಪ್ರತಿ ಗುರುವಾರ ಶಾಲಾವಧಿ ಬಳಿಕ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಠ ಹೇಳಿಕೊಡುತ್ತಿದ್ದಾರೆ.
ಗೋಕಾಕ ಬಿಇಒ ಜಿ.ಬಿ. ಬಳಗಾರ, ಮುಖ್ಯಶಿಕ್ಷಕ ಅಶೋಕ ತೋಟಗಿ, ಶಿಕ್ಷಕ ರವಿ ದೇಮಶೆಟ್ಟಿ ಗುರುವಾರ ಹಲವು ವಿದ್ಯಾರ್ಥಿಗಳ ಮನೆಗೆ ಬಂದಿದ್ದರು. ಕಠಿಣ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು. ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗಮನಿಸಿ, ಉತ್ತರ ಬರೆಯುವ ವಿಧಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಲಹೆ ನೀಡಿದರು.
‘ಪ್ರತಿ ಗುರುವಾರ ಸಹ ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ಪಾಠ ಹೇಳಿಕೊಡುತ್ತಿದ್ದಾರೆ. ವಾರ್ಷಿಕ ಪರೀಕ್ಷೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಭಯ ಹೋಗಲಾಡಿಸಿ ಪ್ರೇರಣೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇದರೊಂದಿಗೆ ಪರೀಕ್ಷೆಯ ಮಹತ್ವವನ್ನು ಪಾಲಕರಿಗೂ ತಿಳಿಸಿದಂತಾಗುತ್ತದೆ’ ಎಂದು ಅಶೋಕ ತೋಟಗಿ ಹೇಳಿದರು.