ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗಾಗಿ ಕಂಡಲೆಲ್ಲ ಶೌಚಾಲಯ

ರಾಜೀವ್ ಗಾಂಧಿ ಪಂಚಾಯತ್ ಸಂಘಟನೆಯ ಸಮಾವೇಶದಲ್ಲಿ ಸತೀಶ ಟೀಕೆ
Last Updated 8 ಸೆಪ್ಟೆಂಬರ್ 2021, 13:55 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿ ಸರ್ಕಾರವು ಪ್ರಶಸ್ತಿಗಾಗಿ ಕಂಡಲೆಲ್ಲಾ ಶೌಚಾಲಯಗಳನ್ನು ನಿರ್ಮಿಸಿ ಅಂಕ ತೆಗೆದುಕೊಂಡಿದೆ. ಅವು ನಿರ್ವಹಣೆ ಮತ್ತು ನೀರಿನ ವ್ಯವಸ್ಥೆ ಇಲ್ಲದೆ ಹಾಳಾಗಿವೆ. ಲೆಕ್ಕಕ್ಕೆ ಮಾತ್ರ ಎನ್ನುವಂತಾಗಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ರಾಜೀವ್‌ಗಾಂಧಿ ಪಂಚಾಯತ್ ಸಂಘಟನೆ ವತಿಯಿಂದ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಿಟ್ಟಿ ಪ್ರಚಾರ ಮಾಡುತ್ತಿದೆ. ಮನಮೋಹನ್‌ ಸಿಂಗ್ ನೇತೃತ್ವದ ನಮ್ಮ ಸರ್ಕಾರ ಇದ್ದಾಗ ಸ್ವಚ್ಛ ಭಾರತ ಯೋಜನೆ ಜೊತೆಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಇದಕ್ಕಾಗಿ ವರ್ಷಕ್ಕೆ ₹33ಸಾವಿರ ಕೋಟಿ ಅನುದಾನ ಬಿಡುಗಡೆ ಕೂಡ ಆಗಿದೆ. ದೇಶಕ್ಕೆ ಸಾಕಷ್ಟು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಈ ಯೋಜನೆಗಳನ್ನು ಈಗ ಮುಂದುವರಿಸಲಾಗಿದೆ. ಆದರೆ, ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿಕೊಳ್ಳಲಾಗುತ್ತಿದೆ. ಈ ಸರ್ಕಾರವು ಶೌಚಾಲಯ, ಯೋಗ ಎಂದು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ’ ಎಂದು ಟೀಕಿಸಿದರು.

ಏನು ಮಾಡಿದ್ದಾರೆ?:

‘ಬಿಜೆಪಿ ಅಪ್ರಚಾರ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ತಳಮಟ್ಟದಿಂದ ಪ್ರಚಾರ ಮಾಡಬೇಕು. ಹಳ್ಳಿ-ಹಳ್ಳಿಗೂ ತೆರಳಿ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಯೋಜನೆಗಳನ್ನು ಜನರಿಗೆ ತಿಳಿಸಬೇಕು’ ಎಂದು ಸೂಚಿಸಿದರು.

‘ಮೋದಿ ಏಳು ವರ್ಷಗಳಲ್ಲಿ ಏನು ಮಾಡಿದ್ದಾರೆ? ಅವರ ತವರು ರಾಜ್ಯ ಗುಜರಾತ್‌ನಲ್ಲಿ ಕಂಡಲೆಲ್ಲಾ ಕಸದ ರಾಶಿ ಬಿದ್ದಿದೆ. ಇನ್ನು ದೇಶವನ್ನು ಹೇಗೆ ಸ್ವಚ್ಛ ಮಾಡುತ್ತಾರೆ?’ ಎಂದು ಕೇಳಿದರು.

‘ಗ್ರಾಮ ಪಂಚಾಯ್ತಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಆಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಆ ಅನುದಾನವನ್ನು ಗ್ರಾಮೀಣ ಜನತೆಗೆ ತಲುಪಿಸುವ ಪ್ರಯತ್ನ ಮಾಡಬೇಕು. ಯಾವ ಇಲಾಖೆಯಲ್ಲಿ ಏನೆನು ಕೆಲಸಗಳು ಆಗುತ್ತವೆ ಎಂದು ಅರಿಯಬೇಕು. ಸಾಮಾನ್ಯ ಜ್ಞಾನದ ಕೊರತೆ ನೀಗಿಸಿಕೊಳ್ಳಬೇಕು. ಕಾನೂನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮೀಣ ಮಟ್ಟದಲ್ಲಿ ಬಡ ಮಹಿಳೆಯರಿಗೆ ಸ್ವ-ಸಹಾಯ ಸಂಘಗಳನ್ನು ಕಟ್ಟಿಕೊಳ್ಳಲು ಸಹಕಾರ ನೀಡಬೇಕು. ನಿತ್ಯವೂ ಅವರ ಸಮಸ್ಯೆ ಆಲಿಸಬೇಕು. ಹಳ್ಳಿಗಳಲ್ಲಿರುವ ಸಮಸ್ಯೆ ಅರಿತುಕೊಂಡು ಫಲಾನುಭಗಳಿಗೆ ಪರಿಹಾರ ತಲುಪಿಸುವ ಪ್ರಯತ್ನ ಮಾಡೋಣ’ ಎಂದರು.

ರಾಜೀವ್‌ಗಾಂಧಿ ಪಂಚಾಯತ್ ಸಂಘಟನೆ ರಾಜ್ಯ ಸಂಚಾಲಕರಾದ ವಿಜಯಸಿಂಗ್, ಬಿನಿತಾ ಓರಾ, ಬಿ.ಎಂ. ಸಂದೀಪ್, ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಡಿ.ಆರ್. ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ವೀರಕುಮಾರ ಪಾಟೀಲ, ಮಹಾವೀರ ಮೋಹಿತೆ, ಉಮೇಶ ಬಾಳಿ, ಸುನೀಲ ಹನಮ್ಮನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT