ಬೆಳಗಾವಿ: ಆಡುತ್ತಿದ್ದ ಸಂದರ್ಭದಲ್ಲಿ ತೆರೆದ ಬಾವಿಗೆ ಬಿದ್ದು ಇಬ್ಬರು ಸಾವಿಗೀಡಾದ ಘಟನೆ ತಾಲ್ಲೂಕಿನ ಬೆಕ್ಕಿನಕೇರಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ನಡೆದಿದೆ.
ನೆರೆಯ ಮಹಾರಾಷ್ಟ್ರದ ಚಂದಗದ ಗ್ರಾಮದ ಲೋಕೇಶ ಪಾಟೀಲ (10) ಹಾಗೂ ಬೆಕ್ಕಿನಕೇರಿ ಗ್ರಾಮದ ನಿಖಿಲ್ ಬೊಂದ್ರೆ (7) ಮೃತರು. ಲೋಕೇಶ ಕೋವಿಡ್–19 ಕಾರಣದಿಂದ ಶಾಲೆಗಳಿಗೆ ರಜೆ ಇರುವುದರಿಂದಾಗಿ ಹಲವು ದಿನಗಳ ಹಿಂದೆ ಬೆಕ್ಕಿನಕೇರಿಯಲ್ಲಿನ ಮಾವನ ಮನೆಗೆ ಬಂದಿದ್ದ.
‘ಮೂವರು ಬಾಲಕರು ಆಟವಾಡಲು ಹೋಗಿದ್ದರು. ಬಾವಿಯಲ್ಲಿ ಏಡಿಗಳನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಈಜು ಬಾರದ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಒಬ್ಬ ಪಾರಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.
ಕಾಕತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣ ದಾಖಲಾಗಿದೆ.