ಯಾವ ವ್ಯಕ್ತಿಯ ಚಿಂತನೆ ಒಳ್ಳೆಯದಾಗಿರುತ್ತದೆಯೋ ಆತನ ಕಾರ್ಯಗಳು ಕೂಡ ಉತ್ತಮವಾಗಿರುತ್ತವೆ. ಪ್ರತಿಯೊಂದು ಜೀವಿಗೆ ಅದರದೆ ಆದ ಚಿಂತೆಯಿದೆ. ನಮಗೆ ಸಿಗಬೇಕಾದ ವಸ್ತುವು ಸಿಗದೆ ಇದ್ದಾಗ ನಾವು ಅದನ್ನು ಪಡೆಯುವುದಕ್ಕೆ ಹಾತೊರೆಯುತ್ತೇವೆ. ಆಗಲೇ ನಮ್ಮೊಳಗೆ ಅದರ ಕುರಿತು ಚಿಂತೆ ಆರಂಭವಾಗುತ್ತದೆ. ಪ್ರಾಪಂಚಿಕ ಬಂಧನದಲ್ಲಿರುವ ನಾವು ಸಂಕುಚಿತ ವಿಷಯಗಳ ಕುರಿತು ಆಸಕ್ತಿಯನ್ನು ಒಳಗೊಂಡಿದ್ದೇವೆ. ನಮ್ಮ ಚಿಂತೆಯು ಆಧ್ಯಾತ್ಮಿಕ ವಿಷಯದ ಕುರಿತದ್ದಾಗಿರಬೇಕು ಎನ್ನುವುದನ್ನು ಬಸವಣ್ಣನವರು ಉದಾಹರಣೆಗಳ ಮೂಲಕ ಈ ವಚನದಲ್ಲಿ ತಿಳಿಸಿಕೊಟ್ಟಿದ್ದಾರೆ. ಚಕೋರ ಎಂಬ ಪಕ್ಷಿಯು ಚಂದ್ರಮನ ಉದಯವನ್ನೇ ನಿರೀಕ್ಷಿಸುತ್ತದೆ. ಕಮಲದ ಹೂವು ಸೂರ್ಯನ ಕಿರಣಗಳ ಸ್ಪರ್ಶಕ್ಕಾಗಿ ಕಾಯುತ್ತಿರುತ್ತದೆ. ದುಂಬಿಯು ಸುವಾಸನೆಯುಕ್ತ ಪರಿಮಳಕ್ಕಾಗಿ ಹಾತೊರೆಯುವಂತೆಯೆ ನಮಗೂ ಭಗವಂತನ ನಾಮಸ್ಮರಣೆಯೇ ಮುಖ್ಯವಾಗಿರಬೇಕು ಎನ್ನುವುದನ್ನು ತಿಳಿಸಿದ್ದಾರೆ. ಇದು, ನಮ್ಮೆಲ್ಲರಿಗೂ ಪ್ರಸ್ತುತವಾಗಿದೆ.